ದೇಶ

ಡೇರಾ ಆಶ್ರಮದ ಕೇಂದ್ರ ಕಚೇರಿಯಲ್ಲಿ 600ಕ್ಕೂ ಹೆಚ್ಚು ಮಾನವ ಅಸ್ಥಿಪಂಜರಗಳು ಪತ್ತೆ!

Manjula VN
ಸಿರ್ಸಾ: ಅತ್ಯಾಚಾರ ಪ್ರಕರಣ ಸಂಬಂಧ ಜೈಲು ಸೇರಿರುವ ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್'ನ ಡೇರಾ ಸಚ್ಚಾ ಸೌಧ ಆಶ್ರಮದ ಕೇಂದ್ರ ಕಚೇರಿಯಲ್ಲಿ ಸುಮಾರು 600ಕ್ಕೂ ಹೆಚ್ಚು ಮಾನವ ಅಸ್ಥಿಪಂಜರಗಳನ್ನು ಸಮಾಧಿ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 
ಸಿರ್ಸಾದಲ್ಲಿರುವ ಡೇರಾ ಕೇಂದ್ರ ಕಚೇರಿಯೊಳಗೆ ಬೃಹತ್ ಪ್ರಮಾಣದಲ್ಲಿ ಅಸ್ಥಿಪಂಜರಗಳನ್ನು ಸಮಾಧಿ ಮಾಡಲಾಗಿದೆ. ಅಲ್ಲದೆ, ಸಮಾಧಿಗಳ ಮೇಲೆ ಗಿಡಗಳನ್ನು ನೆಡಲಾಗಿದ್ದು, ಕೆಲವು ದೊಡ್ಡ ಮರಗಳಾಗಿವೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. 
ಸಮಾಧಿಯಾಗುವುದು ಎಂದರೆ, ಮೋಕ್ಷ ಸಿಕ್ಕಂತೆ ಎಂಬ ಬಾಬಾ ಗುರ್ಮಿತ್ ರಾಮ್ ರಹೀಮ್ ಸಿಂಗ್'ನ ಆದೇಶದ ಬಳಿಕ ಅಸ್ಥಿಪಂಜರಗಳನ್ನು ಹೂತು ಹಾಕಲಾಗುತ್ತಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ. 
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಹರಿಯಾಣ ಮೂಲದ ಪತ್ರಕರ್ತ ರಾಮಾನಂದ್ ಟಾಟಿಯಾ ಅವರು, ಡೇರಾ ಆಶ್ರಮದ ಮುಖ್ಯ ಕಚೇರಿಯೊಳಗೆ ಬೃಹತ್ ಮಟ್ಟದಲ್ಲಿ ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ. ಗುರ್ಮಿತ್ ಆದೇಶಕ್ಕೆ ವಿರುದ್ಧವಾಗಿ ಅಥವಾ ಆತನನ್ನು ವಿರೋಧಿಸುವವರನ್ನು ಕ್ರೂರವಾಗಿ ಹತ್ಯೆ ಮಾಡಲಾಗುತ್ತಿತ್ತು. ಬಳಿಕ ಆಶ್ರಮದೊಳಗೆ ಮೃತದೇಹವನ್ನು ತಂದು ಸಮಾಧಿ ಮಾಡಲಾಗುತ್ತಿದ್ದು ಎಂದು ಹೇಳಿಕೊಂಡಿದ್ದಾರೆ. 
ಡೇರಾ ಆಶ್ರಮದೊಳಗೆ 15 ವರ್ಷಗಳ ಹಿಂದೆ ಇಬ್ಬರು ಮಹಿಳಾ ಸಾಧ್ವಿಗಳ ಮೇಲೆ ಅತ್ಯಾಚಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. 
SCROLL FOR NEXT