ಬೀಜಿಂಗ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ಟೀಕೆ ಮಾಡಿದ್ದಕ್ಕಾಗಿ ಮತ್ತು ಚೀನಾ ವಿರುದ್ಧ ಅಹಂಕಾರದ ಮನೋಭಾವ ತೋರಿಸುತ್ತಿದೆ ಎಂದು ಚೀನಾ ಮಾಧ್ಯಮ ಭಾರತದ ವಿರುದ್ಧ ಹರಿಹಾಯ್ದಿದೆ. ವಿಶ್ವದಲ್ಲಿ ಪ್ರಬಲ ರಾಷ್ಟ್ರವಾಗಿ ಬೆಳೆಯಬೇಕೆಂಬ ಭಾರತದ ಮಹತ್ವಾಕಾಂಕ್ಷೆಗೆ ಇಂತಹ ನಡವಳಿಕೆ ಸೂಕ್ತವಾಗುವುದಿಲ್ಲ ಎಂದು ಅದು ಹೇಳಿದೆ.
ಚೀನಾದ ಮಾಧ್ಯಮ ಗ್ಲೋಬಲ್ ಟೈಮ್ಸ್ ಇತ್ತೀಚೆಗೆ ಪ್ರಕಟಿಸಿದ ಸಂಪಾದಕೀಯದಲ್ಲಿ ಭಾರತೀಯ ರಾಜಕಾರಣಿಗಳ ವಿರುದ್ಧ ಹರಿಹಾಯ್ದಿದೆ. ಭಾರತದ ರಾಜಕಾರಣಿಗಳು ತಮ್ಮ ದೇಶದ ನ್ಯಾಯ ಮತ್ತು ಭವ್ಯತೆ ಬಗ್ಗೆ ಮಾತನಾಡುತ್ತಾರೆ. ಆದರೆ ನೆರೆ ರಾಷ್ಟ್ರ ಭಾರತದ ಮೂರ್ಖತನ ಮತ್ತು ಕೊಳಕು ಮನಸ್ಥಿತಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಭಾಷಣದಿಂದ ಸಾಬೀತಾಗಿದೆ ಎಂದು ಹೇಳಿದೆ.
ತಾವು ಎಂಜಿನಿಯರ್ ಗಳು, ವೈದ್ಯರು ಮತ್ತು ವಿಜ್ಞಾನಿಗಳನ್ನು ಬೆಳೆಸಿದ್ದೇವೆ ಎನ್ನುವ ಭಾರತ ತಾನು ಎಲ್ಲರಿಗಿಂತ ಶ್ರೇಷ್ಠ ಎಂದು ಅಹಂಕಾರ ಪಟ್ಟುಕೊಂಡು ನೆರೆ ದೇಶ ಕೀಳು ಎಂದು ಹೇಳಲು ಹೊರಟಿರುವುದು ಸರಿಯಲ್ಲ ಎಂದು ಸಂಪಾದಕೀಯದಲ್ಲಿ ಟೀಕಿಸಿದೆ.