ಮುಂಬೈ: ಮುಂಬೈ ಎಲ್ಫಿನ್'ಸ್ಟೋನ್ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ ದುರಂತ ಸಂಭವಿಸಿದ ಹಿನ್ನಲೆಯಲ್ಲಿ ಈ ಬಾರಿ ರೈಲ್ವೇ ಸಿಬ್ಬಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಲ್ಲಿ ದಸರಾ ಆಚರಣೆ ಮಾಡದಿರಲು ನಿರ್ಧರಿಸಿದ್ದಾರೆ.
ನಿನ್ನೆಯಷ್ಟೇ ದೇಶದಾದ್ಯಂತ ಆಯುಧ ಪೂಜೆಯನ್ನು ಆಚರಿಸಲಾಗಿತ್ತು. ಆಚರಣೆ ಮಧ್ಯೆಯೇ ನಿನ್ನೆ ಎಲ್ಫಿನ್'ಸ್ಟೋನ್ ರೈಲ್ವೇ ನಿಲ್ದಾಣದಲ್ಲಿರುವ ಪಾದಚಾರಿ ಮೇಲ್ಸೇತವೆಯಲ್ಲಿ ಕಾಲ್ತುಳಿತ ಸಂಭವಿಸಿ 22 ಮಂದಿ ಸಾವನ್ನಪ್ಪಿದ್ದರು, ಅಲ್ಲದೆ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಈ ಹಿನ್ನಲೆಯಲ್ಲಿ ದಸರಾ ಆಚರಣೆ ಮಾಡದಿರಲು ನಿರ್ಧರಿಸಿದ ರೈಲ್ವೇ ಸಿಬ್ಬಂದಿಗಳು ಕಳೆದ ರಾತ್ರಿ ಕ್ಯಾಂಡಲ್ ಗಳನ್ನು ಹಿಡಿದು ಮೃತಪಟ್ಟವರ ಆತ್ಮಕ್ಕೆ ಶಾಂತಿಯನ್ನು ಕೋರಿದರು.
ರೈಲ್ವೆ ಇಲಾಖೆ ದಸರಾ ಆಚರಣೆ ಮಾಡದೆ ಇರುವುದನ್ನು ಸ್ವತಃ ರೈಲ್ವೆ ಇಲಾಖೆಯ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ಮೇಲ್ಸೇತುವೆಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ಹಿನ್ನಲೆಯಲ್ಲಿ ಸಿಬ್ಬಂದಿಗಳು ಹಾಗೂ ಕೆಲಸಗಾರಾರೂ ಈ ಬಾರಿ ದಸರಾ ಹಬ್ಬವನ್ನು ಆಚರಣೆ ಮಾಡಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ದುರ್ಘಟನೆಯಿಂದ ನಮ್ಮ ಎಲ್ಲಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ತೀವ್ರವಾಗಿ ಬೇಸರಗೊಂಡಿದ್ದಾರೆ. ಹೀಗಾಗಿ ಸ್ವಾಭಾವಿಕವಾಗಿಯೇ ಎಲ್ಲರೂ ದಸರಾ ಆಚರಿಸದಿರಲು ನಿರ್ಧಾರ ಕೈಗೊಂಡಿದ್ದಾರೆಂದು ಪಶ್ಚಿಮ ರೈಲ್ವೇ ವಿಭಾಗದ ಮುಖ್ಯ ವಕ್ತಾರ ರವೀಂದ್ರ ಭಾಸ್ಕರ್ ಅವರು ಹೇಳಿದ್ದಾರೆ.
ಕೇಂದ್ರ ರೈಲ್ವೇ ವಿಭಾಗದ ಮುಖ್ಯ ವಕ್ತಾರ ಸುನೀಲ್ ಉದಾಸಿ ಮಾತನಾಡಿ, ಕೇಂದ್ರ ರೈಲ್ವೇ ಸಿಬ್ಬಂದಿಗಳೂ ಕೂಡ ಈ ಬಾರಿ ಹಬ್ಬವನ್ನು ಆಚರಣೆ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೇ ಮುಂಬೈನ ಎಲ್'ಫಿನ್'ಸ್ಟೋನ್ ರೈಲ್ವೆ ನಿಲ್ದಾಣದ ಬಳಿ ಇರುವ ಪಾದಚಾರಿಗಳ ಮೇಲ್ಸೇತುವೆಯಲ್ಲಿ ದುರ್ಘಟನೆಯೊಂದು ಸಂಭವಿಸಿತ್ತು. ಮೇಲ್ಸೇತುವೆ ಕುಸಿದು ಬೀಳಲಿದೆ ಎಂಬ ವದಂತಿಗಳಿಗೆ ಕಿವಿಗೊಟ್ಟಿದ್ದ ಸ್ಥಳೀಯರು ಆತಂಕಗೊಂಡಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ 22 ಮಂದಿ ಸಾವನ್ನಪ್ಪಿ, 30 ಮಂದಿ ಗಾಯಗೊಂಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos