ಭಾರತ್ ಬಂದ್; ಮಧ್ಯಪ್ರದೇಶದಲ್ಲಿ ತೀವ್ರ ಸ್ವರೂಪ ಪಡೆದ ಪ್ರತಿಭಟನೆ, ಹಲವೆಡೆ ಕಲ್ಲು ತೂರಾಟ
ಭೋಪಾಲ್: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕುರಿತ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ದಲಿತ ಸಂಘಟನೆಗಳ ಭಾರತ್ ಬಂದ್ ಕರೆ ಮಧ್ಯಪ್ರದೇಶದಲ್ಲಿ ತೀವ್ರಗೊಂಡಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆಂದು ಸೋಮವಾರ ತಿಳಿದುಬಂದಿದೆ.
ಮಧ್ಯಪ್ರದೇಶದ ಭಿಂಡ್ ಎಂಬ ಪ್ರದೇಶದಲ್ಲಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ. ಮೊರೆನಾ ಎಂಬ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವುದಾಗಿ ವರದಿಗಳಾಗಿದ್ದು, ಪ್ರಸ್ತುತ ಈ ಪ್ರದೇಶದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಇದಲ್ಲದೆ ಗ್ವಾಲಿಯರ್ ಸೇರಿದಂತೆ ಹಲವೆಡೆ ಸೆಕ್ಷನ್ 144 ಕೂಡ ಜಾರಿ ಮಾಡಲಾಗಿದೆ. ಕರ್ಫ್ಯೂ ಜಾರಿ ಮಾಡಿರುವ ಹಿನ್ನಲೆಯಲ್ಲಿ 4 ಜನಕ್ಕೂ ಹೆಚ್ಚು ಜನರು ಗುಂಪುಗಟ್ಟಿ ನಿಲ್ಲುವುದು, ರಸ್ತೆಯಲ್ಲಿ ಓಡಾಡುವು ಮಾಡುವಂತಿಲ್ಲ.
ಇನ್ನು ರಾಜಸ್ತಾನ, ಜೈಪುರದ ಹಲವೆಡೆ ರೈಲುಗಳನ್ನು ತಡೆಯಲಾಗಿದ್ದು, ಹಲವೆಡೆ ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ. ಇನ್ನು ಉತ್ತರಪ್ರದೇಶದ ಮೀರುತ್ ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ಏರ್ಪಟ್ಟಿದ್ದು, ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಇದರಂತೆ ಜಾರ್ಖಾಂಡ್'ನ ರಾಂಚಿಯಲ್ಲಿಯೂ ಪೊಲೀಸರು ಹಾಗೂ ಪ್ರತಿಭಟನಾ ಕಾರರ ನಡುವೆ ಘರ್ಷಣೆ ಏರ್ಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಎಸ್'ಟಿ/ಎಸ್'ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣಗಳನ್ನು ತಕ್ಷಣವೇ ದಾಖಲಿಸಬೇಕು ಮತ್ತು ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕೆಂಬ ನಿಯಮವನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಇತ್ತೀಚೆಗಷ್ಟೇ ತೀರ್ಪೊಂದನ್ನು ನೀಡಿತ್ತು. ತೀರ್ಪು ಸಂಬಂಧಿಸಿ ಕಳೆದ ವಾರ ಕೇಂದ್ರ ಸಚಿವರುಗಳಾದ ರಾಮ್ ವಿಲಾಸ್ ಪಾಸ್ವಾನ್ ಮತ್ತು ಥಾವರ್ ಚಂದ್ ಗೆಹ್ಲೋಟ್ ನೇತೃತ್ವದ ಎನ್'ಡಿಎ ಸಂಸದರ ನಿಯೋಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತ್ತು.
ಪ್ರತಿಭಟನೆಯಲ್ಲಿ ನವಜಾತ ಶಿಶು ಸಾವು
ಎಸ್'ಸಿ/ಎಸ್'ಟಿ ಕಾಯ್ದೆ ಕುರಿತ ಸುಪ್ರೀಂಕೋರ್ಟ್ ಆದೇಶ ಸಂಬಂಧ ಬಿಹಾರದಲ್ಲೂ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನೆಯಿಂದಾಗಿ ಸಂಚಾರಕ್ಕೆ ಸುಗಮ ಹಾದಿ ಸಿಗದ ಕಾರಣ ಆ್ಯಂಬುಲೆನ್ಸ್ ನಲ್ಲಿಯೇ ನವಜಾತ ಶಿಶುವೊಂದು ಸಾವನ್ನಪ್ಪಿದೆ.
ಬಿಹಾರ ರಾಜ್ಯದ ವೈಶಾಲಿ ಎಂಬ ಜಿಲ್ಲೆಯಲ್ಲಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸಾಗಿಸದ ಪರಿಣಾಮ, ಚಿಕಿತ್ಸೆ ಸೂಕ್ತ ಸಮಯಕ್ಕೆ ಸಿಗದೆ ನವಜಾತ ಶಿಶು ಸಾವನ್ನಪ್ಪಿದೆ ಎಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos