ಚಂಡೀಗಢ: ಇರಾಕ್ ನಲ್ಲಿ ಹತ್ಯೆಗೀಡಾದ 39 ಭಾರತೀಯರ ಪೈಕಿ 38 ಭಾರತೀಯರ ಪಾರ್ಥಿವ ಶರೀರಗಳು ಭಾರತವನ್ನು ತಲುಪಿವೆ.
ಬಾಗ್ದಾದ್ ನಿಂದ ರವಾನೆಯಾದ ಮೃತದೇಹವಿರುವ ಪೆಟ್ಟಿಗೆಗಳು ಅಮೃತ್ ಸರಕ್ಕೆ ತಲುಪಿದ್ದು ಕುಟುಂಬ ಸದಸ್ಯರು ತಮ್ಮ ಸಂಬಂಧಿಕರ ಮೃತದೇಹಗಳನ್ನು ಸ್ವೀಕರಿಸಿದ್ದಾರೆ. 39 ಮಂದಿಯ ಪೈಕಿ ಮತ್ತೋರ್ವ ವ್ಯಕ್ತಿಯ ಗುರುತು ಇನ್ನಷ್ಟೇ ಸ್ಪಷ್ಟವಾಗಬೇಕಾಗಿದೆ.
ಮೃತ ಭಾರತೀಯರ ಪಾರ್ಥಿವ ಶರೀರಗಳನ್ನು ಭಾರತಕ್ಕೆ ತರುವುದಕ್ಕಾಗಿ ವಿದೇಶಾಂಗ ಇಲಾಖೆ ರಾಜ್ಯ ಖಾತೆ ಸಚಿವ ವಿಕೆ ಸಿಂಗ್ ಸ್ವತಃ ಇರಾಕ್ ಗೆ ತೆರಳಿದ್ದರು. 31 ಮೃತದೇಹಗಳು ಪಂಜಾಬ್ ಮತ್ತಿ ಹಿಮಾಚಲ ಪ್ರದೇಶಕ್ಕೆ ಸೇರಿದ್ದಾಗಿದ್ದು, ಉಳಿದ 7 ಮೃತದೇಹಗಳು ಕೋಲ್ಕತ್ತಾ ಮತ್ತು ಪಾಟ್ನಾಗೆ ಸೇರಿದ್ದಾಗಿವೆ.
ಮೃತದೇಹಗಳನ್ನು ಸ್ವೀಕರಿಸುವ ಸಂದರ್ಭದಲ್ಲಿ ಪಂಜಾಬ್ ನ ಕ್ಯಾಬಿನೆಟ್ ಸಚಿವ ನವಜೋತ್ ಸಿಂಗ್ ಸಿಧು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು.
ಭಾರತೀಯರ ಹತ್ಯೆ ಬಗ್ಗೆ ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ಇರಲಿಲ್ಲ
40 ಭಾರತೀಯರು ಅಕ್ರಮ ಟ್ರಾವಲ್ ಏಜೆಂಟ್ ಗಳ ಮೂಲಕ ವಿದೇಶಕ್ಕೆ ತೆರಳಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಐಎಸ್ಐಎಸ್ ಉಗ್ರರು ಹತ್ಯೆ ಮಾಡಿರುವುದರ ಬಗ್ಗೆ ಭಾರತದ ರಾಯಭಾರಿ ಕಚೆರಿಗಳಲ್ಲಿ ಯಾವುದೇ ಮಾಹಿತಿ ಇರಲಿಲ್ಲ ಎಂದು ವಿಕೆ ಸಿಂಗ್ ಹೇಳಿದ್ದಾರೆ.
38 ಭಾರತೀಯರ ಮೃತ ದೇಹವನ್ನು ಭಾರತಕ್ಕೆ ವಾಪಸ್ ತರಲು ಇರಾಕ್ ಗೆ ತೆರಳಿದ್ದ ಕೇಂದ್ರ ಸಚಿವ ವಿ.ಕೆ ಸಿಂಗ್, ನಕಲಿ ಏಜೆಂಟ್ ಗಳ ಮೂಲಕ ವಿದೇಶಕ್ಕೆ ತೆರಳಬೇಡಿ ಎಂಬ ಜಾಗೃತಿ ಮೂಡಿಸಲು 2014 ರಲ್ಲಿ ಭಾರತ ಸರ್ಕಾರ ಅಭಿಯಾನ ಕೈಗೊಂಡಿತ್ತು. ನಾಪತ್ತೆಯಾಗಿದ್ದ 40 ಭಾರತೀಯರ ಬಗ್ಗೆ ರಾಯಭಾರಿ ಕಚೇರಿಯಲ್ಲಿ ದಾಖಲೆಯೇ ಇರಲಿಲ್ಲ. ಏಕೆಂದರೆ ಆ 40 ಜನರು ನಕಲಿ ಏಜೆಂಟ್ ಗಳ ಮೂಲಕ ಇರಾಕ್ ಗೆ ತೆರಳಿದ್ದರು, ಒಂದು ವೇಳೆ ಭಾರತೀಯ ರಾಯಭಾರಿ ಕಚೇರಿಯಲ್ಲಿ ಈ 40 ಜನರ ಬಗ್ಗೆ ಮಾಹಿತಿ ಇದ್ದು ಅಪಾಯದಲ್ಲಿ ಸಿಲುಕಿದ್ದು ತಿಳಿದಿದ್ದರೆ ಅಪಾಯದಿಂದ ರಕ್ಷಿಸುತ್ತಿತ್ತು ಎಂದು ವಿಕೆ ಸಿಂಗ್ ಹೇಳಿದ್ದಾರೆ.