ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ವಿರುದ್ಧ ಆರೋಪ ಮಾಡಿರುವ ಕೇಂದ್ರ ಜಾಗೃತ ಆಯುಕ್ತ(ಸಿವಿಸಿ) ಕೆ.ವಿ.ಚೌಧರಿ ಅವರು, ಕೇಂದ್ರೀಯ ಬ್ಯಾಂಕ್ ಸೂಕ್ತ ರೀತಿಯಲ್ಲಿ ಆಡಿಟಿಂಗ್ ಮಾಡುತ್ತಿಲ್ಲ ಎಂದು ದೂರಿದ್ದಾರೆ.
ಪಿಎನ್ ಬಿ ವಂಚನೆ ನಡೆದ ಅವಧಿಯಲ್ಲಿ ಆರ್ ಬಿಐ ಸರಿಯಾಗಿ ಆಡಿಟಿಂಗ್ ಮಾಡಿಲ್ಲ ಮತ್ತು ಆಡಿಟಿಂಗ್ ವ್ಯವಸ್ಥೆ ಹೆಚ್ಚು ಸದೃಢವಾಗುವ ಅಗತ್ಯ ಇದೆ ಎಂದು ಚೌಧರಿ ಹೇಳಿದ್ದಾರೆ.
ಸಿವಿಸಿ, 13 ಸಾವಿರ ಕೋಟಿ ರುಪಾಯಿಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಸಿಬಿಐ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದು, ಬ್ಯಾಂಕಿಂಗ್ ಕ್ಷೇತ್ರವನ್ನು ನಿಯಂತ್ರಿಸುವ ಆರ್ ಬಿಐ ಆರ್ಥಿಕ ಸಂಕಷ್ಟದ ಸಮಯದಲ್ಲಿ ನಡೆಸುವ 'ಅಪಾಯ ಆಧಾರಿತ' ಆಡಿಟಿಂಗ್ ಅನ್ನು ಕೆಲಕಾಲ ಸ್ಥಗಿತಗೊಳಿಸಿತ್ತು ಎಂದು ಚೌಧರಿ ತಿಳಿಸಿದ್ದಾರೆ.
ಆರ್ ಬಿಐ ಬ್ಯಾಂಕ್ ಗಳಿಗೆ ಕೇವಲ ಮಾರ್ಗದರ್ಶಿಗಳನ್ನು ಮಾತ್ರ ನೀಡುತ್ತದೆ. ಆದರೆ ಬ್ಯಾಂಕ್ ಗಳಲ್ಲಿ ನಿಜಕ್ಕೂ ಏನು ನಡೆಯುತ್ತಿದೆ ಎಂಬುದನ್ನು ಬ್ಯಾಂಕ್ ಶಾಖೆಗಳಿಗೆ ತೆರಳಿ ಪರಿಶೀಲಿಸುವುದಿಲ್ಲ ಸಿವಿಸಿ ಆಕ್ರೋಶ ವ್ಯಕ್ತಪಡಿಸಿದೆ.