ನವದೆಹಲಿ: ಸುಳ್ಳು ಸುದ್ದಿ ಪ್ರಕಟಿಸುವ ಪತ್ರಕರ್ತರ ಮಾನ್ಯತೆ ರದ್ದುಗೊಳಿಸುವ ಕೇಂದ್ರದ ನಿರ್ಧಾರ ’ಅಘೋಷಿತ ತುರ್ತು ಸ್ಥಿತಿಯಾಗಿದೆ’ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ.
ಮಾದ್ಯಮ ಎನ್ನುವುದು ಪ್ರಜಾಪ್ರಭುತ್ವದ ನಾಲ್ಕನೇ ಅಂಗ, ಇಂತಹಾ ಅಂಗವೊಂದದ ದನಿಯನ್ನು ಮೊಟಕಾಗಿಸುವುದು ನಾಗರಿಕ ಹಕ್ಕುಗಳಿಗೆ ಅಪಾಯಕಾರಿ ಎಂದು ವಿಎಚ್ಪಿ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.
"ಸರ್ಕಾರದ ಈ ನಿಲುವನ್ನು ಣಾವು ಬಲವಾಗಿ ಖಂಡಿಸುತ್ತೇವೆ. ಇದೊಂದು ಅಘೋಷಿತ ತುರ್ತು ಸ್ಥಿತಿಯಾಗಲಿದೆ. " ತೊಗಾಡಿಯಾ ಹೇಳಿದ್ದಾರೆ. "ಅಂದು ತುರ್ತು ಸ್ಥಿತಿಯನ್ನು ವಿರೋಧಿಸಿದವರು ಐವತ್ತೆರಡು ವರ್ಷಗಳ ಬಳಿಕ ಅಧಿಕಾರಕ್ಕೆ ಬಂದಾಗ ಮತ್ತೆ ತಾವೂ ಇಂತಹಾ ಆಡಳಿತಕ್ಕೆ ಮುಂದಾಗಿರುವುದು ಅಪಾಯಕಾರಿ ಹಾಗೂ ಘೋರ ಕ್ರಮವಾಗಿದೆ" ಯಾರೊಬ್ಬರ ಹೆಸರನ್ನು ಉಲ್ಲೇಖಿಸಲ್ದೆ ತೊಗಾಡಿಯಾ ಮಾತನಾಡಿದರು.
ಇದು ಆಡಳಿತಗಾರರ ಅಪಾಯಕಾರಿ ಪ್ರವೃತ್ತಿಯಾಗಿದೆ ಮತ್ತು ಸಾಮಾನ್ಯಜನರಿಗೂ ಇದು ಸ್ಪಷ್ಟವಾಗಿ ಗೋಚರವಾಗುತ್ತದೆ ಎಂದು ಅವರು ಹೇಳಿದರು. ಪ್ರಜಾಪ್ರಭುತ್ವದಲ್ಲಿ ಇಂತಹಾ ಕಠಿಣ ನಿಯಮಗಳನ್ನು ತರುವುದರ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಲು ತೊಗಡಿಯಾ ಮನವಿ ಮಾಡಿದ್ದಾರೆ.
ಏತನ್ಮಧ್ಯೆ ಸುಳ್ಳು ಸುದ್ದಿ ಪ್ರಕಟಿಸುವ ಪತ್ರಕರ್ತರ ಮಾನ್ಯತೆ ರದ್ದು ಮಾಡುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆದೇಶವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ.