ನವದೆಹಲಿ: ಸಂಸತ್ತಿನಲ್ಲಿ ಪದೇ ಪದೇ ಗದ್ದಲ ಎಬ್ಬಿಸುತ್ತಿರುವ ಸಂಸದರ ವರ್ತನೆಯಿಂದ ಬೇಸತ್ತಿರುವ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಎಚ್ಚರಿಕೆ ನೀಡಿದ್ದಾರೆ,
ಸಂಸತ್ತಿನಲ್ಲಿ ನಡೆಯುವ ಪ್ರತಿಯೊಂದು ಅಂಶವನ್ನು ದೇಶದ ಜನತೆ ಗಮನಿಸುತ್ತಿರುತ್ತಾರೆ, ಜನರು ದೇಶದ ಅಭಿವೃದ್ಧಿಯನ್ನು ಬಯಸಿದ್ದಾರೆ, ಆದರೆ ನೀವು ದೇಶದ ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದೀರಿ ಎಂದು ಹೇಳಿದ್ದಾರೆ.
ಸದನದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳನ್ನು ನೋಡುತ್ತಿರುವ ಜನರು ಕ್ಷೋಬೆಗೊಳಗಾಗಿದ್ದಾರೆ ಎಂದು ಹೇಳಿದ ಅವರು ಸದನವನ್ನು ಮಧ್ಯಾಹ್ನ 2 ಗಂಟೆವರೆಗೂ ಮುಂದೂಡಿದರು.
ರಾಜ್ಯಸಭೆಗೆ ಹೊಸದಾಗಿ ಆಯ್ಕೆಯಾದ 12 ಸಂಸದರು ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಸತ್ತಿನಲ್ಲಿ ಕೋಲಾಹಲ ಆರಂಭವಾಯಿತು. ಸದನದ ಬಾವಿಗಿಳಿದು ವಿಪಕ್ಷ ನಾಯಕರು ಪ್ರತಿಭಟನೆ ಆರಂಭಿಸಿದರು. ತಮ್ಮ ಆಸನಕ್ಕೆ ಮರಳುವಂತೆ ಸಭಾಧ್ಯಕ್ಷರು ಎಷ್ಟು ಹೇಳಿದರೂ ಕೇಳಿಸಿಕೊಳ್ಳದ ಸದಸ್ಯರು ಗದ್ದಲ ಮುಂದುವರಿಸಿದರು.
ಆದರೆ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರ ಮಾತುಗಳಿಗೆ ಗಮನ ಕೊಡದ ಸಂಸದರು ತಮ್ಮ ಘೋಷಣೆ ಕೂಗುತ್ತಿದ್ದರು. ಎಲ್ಲಾ ವಿಷಯಗಳನ್ನು ಚರ್ಚಿಸಲು ಅವಕಾಶ ಕೊಡುತ್ತಿದ್ದೇವೆ. ಆದರೆ ನೀವು ಯಾವ ವಿಷಯವನ್ನು ಚರ್ಚಿಸುತ್ತಿಲ್ಲ, ಏನಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ, ನೀವೆಲ್ಲರು ಪ್ರಜಾಪ್ರಭುತ್ವವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೀರಾ. ಇದನ್ನೆಲ್ಲಾ ನೋಡುತ್ತಿರುವ ಇಡೀ ದೇಶ ಖಿನ್ನತೆಗೊಳಗಾಗಿದೆ.
ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳು ಸಂಸದರು ಬಿಗಿಪಟ್ಟು ಹಿಡಿದು ಪ್ರತಿಭಟನೆ ನಡಿಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos