ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಮನೆಗೆ ನುಗ್ಗಿ ಮತ್ತೊಬ್ಬ ನಾಗರೀಕನ ಅಪಹರಣ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಮನೆಗೆ ನುಗ್ಗಿ ಮತ್ತೊಬ್ಬ ನಾಗರೀಕನನನ್ನು ಅಪಹರಣ ಮಾಡಿರುವ ಘಟನೆ ಬಂಡಿಪೋರಾದಲ್ಲಿ ಗುರುವಾರ ನಡೆದಿದೆ.
ಹಜಿನ್ ಪ್ರದೇಶದಲ್ಲಿರುವ ಅಬ್ದುಲ್ ಗಫರ್ ಭಟ್ ಎಂಬುವವರ ಮನೆಗೆ ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನುಗ್ಗಿರುವ ಉಗ್ರರು, ಸ್ಥಳದಲ್ಲಿದ್ದವರಿಗೆ ಹಿಗ್ಗಾಮುಗ್ಗಾ ಥಳಿಸಿ ವ್ಯಕ್ತಿಯನ್ನು ಹೊತ್ತೊಯ್ದಿದ್ದಾರೆಂದು ತಿಳಿದುಬಂದಿದೆ.
ನಾಗರೀಕರ ಮನೆಗೆ ನುಗ್ಗಿರುವ ಉಗ್ರರು ಅಬ್ದುಲ್ ಗಫರ್ ಭಟ್ ಹಾಗೂ ಅವರ ಪುತ್ರ ಮನ್ಜೂರ್ ಅಹ್ಮದ್ ಎಂಬುವವರನ್ನು ಅಪಹರಣ ಮಾಡಿದ್ದರು. ಗಫರ್ ಭಟ್ ಅವರು ಉಗ್ರರಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಭದ್ರತಾ ಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿವೆ.
ಈ ಹಿಂದೆ ಕೂಡ ಇದೇ ಪ್ರದೇಶದಲ್ಲಿಯೇ ನಾಗರೀಕರೊಬ್ಬರ ಮನೆಗೆ ನುಗ್ಗಿದ್ದ ಉಗ್ರರು, ವ್ಯಕ್ತಿಯನ್ನು ಅಪಹರಣ ಮಾಡಿ, ಬರ್ಬರವಾಗಿ ಹತ್ಯೆ ಮಾಡಿದ್ದರು. ಅಪಹರಣ ಮಾಡಿದ್ದ ಸಂದರ್ಭದಲ್ಲಿ ಉಗ್ರರು ನಡೆಸಿದ್ದ ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಹಾಗೂ ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದರು.