ದೇಶ

ಬಿಜೆಪಿ ಶಾಸಕನಿಂದ ಅತ್ಯಾಚಾರ ಆರೋಪ, ಸಿಎಂ ಯೋಗಿ ಮನೆ ಮುಂದೆ ಆತ್ಮಹತ್ಯೆಗೆ ಮಹಿಳೆ ಯತ್ನ

Lingaraj Badiger
ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಲಖನೌ ನಿವಾಸದ ಮುಂದೆ ಮಹಿಳೆಯೊಬ್ಬರು ಕುಟುಂಬ ಸಮೇತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.
ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಮತ್ತು ಆತನ ಸಹಚರರು ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಆರೋಪಿಸಿದ್ದಾರೆ.
'ನನ್ನ ಮೇಲೆ ಅತ್ಯಾಚಾರ ಎಸಗಲಾಗಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲು ನಾನು ಹಲವು ಪೊಲೀಸ್ ಠಾಣೆಗಳಿಗೆ ಅಲೆದಿದ್ದೇನೆ. ಯಾರೂ ನನ್ನ ಅಳಲು ಕೇಳುತ್ತಿಲ್ಲ ಮತ್ತು ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ ತನ್ನ ಮೇಲೆ ಅತ್ಯಾಚಾರ ಎಸಗಿದವರನ್ನು ಈ ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ನಾನು ಇಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ' ಎಂದು ಮಹಿಳೆ ಹೇಳಿರುವುದಾಗಿ ಎನ್ಎನ್ಐ ವರದಿ ಮಾಡಿದೆ.
ಈ ಸಂಬಂಧ ನಾನು ಮುಖ್ಯಮಂತ್ರಿಗಳಿಗೂ ಮನವಿ ಮಾಡಿದ್ದೇನೆ. ಆದರೂ ಯಾವುದೇ ಪ್ರಯೋಜನೆ ಆಗಿಲ್ಲ ಎಂದು ಮಹಿಳೆ ದೂರಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಲಖನೌ ಎಡಿಜಿ ರಾಜೀವ್ ಕೃಷ್ಣ ಅವರು, ಮಹಿಳೆ ಮತ್ತು ಬಿಜೆಪಿ ಶಾಸಕರ ನಡುವೆ ಕಳೆದ ಒಂದು ದಶಕದಿಂದ ಆಸ್ತಿ ವಿವಾದ ಇದೆ. ಮಹಿಳೆ ಕುಲದೀಪ್ ಸಿಂಗ್ ಸೆಂಗರ್ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸುತ್ತಾರೆ ಮತ್ತು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆ ಇಬ್ಬರು ನಡುವೆ ಕಳೆದ 10-12 ವರ್ಷಗಳಿಂದ ಆಸ್ತಿ ವಿವಾದ ಇರುವುದು ಪತ್ತೆಯಾಗಿದೆ ಎಂದಿದ್ದಾರೆ.
ಸೂಕ್ತ ತನಿಖೆಯ ನಂತರವೇ ಅತ್ಯಾಚಾರ ಆರೋಪದ ಬಗ್ಗೆ ಸತ್ಯ ಅಸತ್ಯತೆ ಹೊರ ಬರಲಿದೆ ಎಂದು ಕೃಷ್ಣ ತಿಳಿಸಿದ್ದಾರೆ.
ಮಹಿಳೆ ಇಂದು ಕುಟಂಬ ಸಮೇತ ಸಿಎಂ ಮನೆ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರು ಎಂದು ವರದಿ ತಿಳಿಸಿದೆ.
SCROLL FOR NEXT