ನವದೆಹಲಿ: ಉನ್ನಾವೊ, ಕಥುವಾ ಅತ್ಯಾಚಾರ ಪ್ರಕರಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದಿದ್ದು, ಅಪರಾಧಿಗಳನ್ನು ಬಿಡುವುದಿಲ್ಲ, ನಮ್ಮ ಹೆಣ್ಣು ಮಕ್ಕಳಿಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ಚರ್ಚೆಯಾಗುತ್ತಿರುವ ವಿಷಯ ನಾಗರಿಕ ಸಮಾಜದ ಭಾಗವಾಗಿರುವುದಕ್ಕೆ ಸಾಧ್ಯವಿಲ್ಲ, "ಒಂದು ರಾಷ್ಟ್ರ, ಸಮಾಜವಾಗಿ ಈ ಘಟನೆಗಳ ಬಗ್ಗೆ ನಾವೆಲ್ಲ ತಲೆತಗ್ಗಿಸಬೇಕಾಗಿದೆ. ಅತ್ಯಾಚಾರದ ಪಿಡುಗನ್ನು ತೊಲಗಿಸಲು ನಾವು ಹೋರಾಡಬೇಕಿದೆ ಎಂದು ಪ್ರಧಾನಿ ಹೇಳಿದ್ದಾರೆ.
ನಮ್ಮ ರಾಷ್ಟ್ರದ ಯಾವುದೇ ಭಾಗದಲ್ಲಿ ಈ ರೀತಿಯ ಘಟನೆಗಳು ನಡೆಯುವುದು ನಮ್ಮ ಪ್ರಜ್ಞೆಯನ್ನು ಅಲುಗಾಡಿಸಿದೆ, ಈ ದುಷ್ಕೃತ್ಯಗಳ ಬಗ್ಗೆ ನಾವು ಹೋರಾಟ ನಡೆಸಬೇಕಿದೆ ಎಂದಿರುವ ಪ್ರಧಾನಿ ಮೋದಿ, ಮನೆಯಲ್ಲಿ ಹೆಣ್ಣುಮಕ್ಕನ್ನು ಮಾತ್ರ ಪ್ರಶ್ನಿಸಬೇಡಿ, ಗಂಡು ಮಕ್ಕಳನ್ನೂ ಅವರು ಎಲ್ಲಿ ಹೋಗುತ್ತಾರೆ, ಏನು ಮಾಡುತ್ತಾರೆ ಎಂಬ ಬಗ್ಗೆಯೂ ಪ್ರಶ್ನಿಸಿ ಎಂದು ಕೆಂಪುಕೋಟೆಯ ಭಾಷಣದಲ್ಲಿ ಹೇಳಿದ್ದೆ. ಅತ್ಯಾಚಾರಗಳಂತಹ ಹೇಯ ಕೃತ್ಯಗಳ ವಿರುದ್ಧ ಹೋರಾಡಲು ನಾವು ನಮ್ಮ ಕೌಟುಂಬಿಕ ಮೌಲ್ಯಗಳು, ಸಾಮಾಜಿಕ ಮೌಲ್ಯಗಳು ಹಾಗೂ ನ್ಯಾಯಾಂಗದ ವ್ಯವಸ್ಥೆಯನ್ನು ಬಲಿಷ್ಠಗೊಳಿಸಬೇಕಿದೆ ಎಂದು ಮೋದಿ ಹೇಳಿದ್ದಾರೆ.