ಜಮ್ಮು: ಕತುವಾ ಜಿಲ್ಲೆಯಲ್ಲಿ 8 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಮರ್ಥಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ ಡಿಜಿಪಿ ಎಸ್.ಪಿ.ವೈದ್ ಅವರು, ನಾವು ಹಿಂದು ಅಥವಾ ಮುಸ್ಲಿಮರೆಂದು ಕೆಲಸ ಮಾಡುವುದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ಕತುವಾ ಅತ್ಯಾಚಾರ ಪ್ರಕರಣ ಸಂಬಂಧ ಕೇಳಿಬರುತ್ತಿರುವ ಆರೋಪಿಗಳಿಗೆ ಸ್ಪಷ್ಟನೆ ನೀಡಿರುವ ಅವರು, ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದರೆ, ಅದಕ್ಕೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಯಾವುದೇ ವಿರೋಧಗಳಿಲ್ಲ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈಗಾಗಲೇ ಪ್ರಕರಣದ ತನಿಖೆ ನಡೆಸುತ್ತಿದ್ದು, ಪ್ರಕರಣ ಕುರಿತ ಆರೋಪಿಗಳ ವಿರುದ್ಧ ಕತುವಾ ನ್ಯಾಯಾಲಯದಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದೆ.
ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದರೆ, ಅದಕ್ಕೆ ನಾವು ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ, ಸಿಬಿಐನಷ್ಟೇ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕೂಡ ಸಾಮರ್ಥ್ಯವನ್ನು ಹೊಂದಿದ್ದಾರೆಂದು ಹೇಳಿದ್ದಾರೆ.
ಉಗ್ರರ ವಿರುದ್ಧ ಹಾಗೂ ಕಲ್ಲು ತೂರಾಟದಂತಹ ಪ್ರಕರಣಗಳ ವಿರುದ್ಧ ಹೋರಾಟ ನಡೆಸುವ ನಾವು, ನಮ್ಮ ವೃತ್ತಿಪರ ಕೆಲಸವಾಗಿರುವ ತನಿಖೆಯನ್ನೇಕೆ ನಡೆಸಬಾರದು ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಪ್ರಕರಣದಲ್ಲಿ ಓರ್ವ ಅಧಿಕಾರಿ ಕೂಡ ಭಾಗಿಯಾಗಿದ್ದಾರೆಂಬ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸಬ್ ಇನ್ಸ್ ಪೆಕ್ಟರ್ ಅವರನ್ನು ನ್ಯಾಯಾಲಯವೇ ಖುಲಾಸೆಗೊಳಿಸಿದೆ ಎಂದಿದ್ದಾರೆ.
ಎಲ್ಲಾ ಪ್ರದೇಶಗಳಿಂದಲೂ ಹಾಗೂ ಎಲ್ಲಾ ಧರ್ಮಗಳಿಂದಲೂ ಅಧಿಕಾರಿಗಳು ಬಂದಿದ್ದಾರೆ. ಎಲ್ಲಾ ರ್ಯಾಂಕ್ ಗಳಲ್ಲೂ ಎಸ್ಐಟಿ ಅಧಿಕಾರಿಗಳಿದ್ದಾರೆ. ಧರ್ಮದ ಪ್ರಕಾರ ಅವರು ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
8 ವರ್ಷದ ಬಾಲಕಿಯೋರ್ವಳು ಹಲವು ದಿನಗಳಿಂದಲೂ ನಾಪತ್ತೆಯಾಗಿದ್ದಳು. ಬಾಲಕಿಯ ಮೃತದೇಹ ಜ.17 ರಂದು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಜ.23 ರಂದು ಎಸ್ಐಟಿ ತನಿಖೆಗೆ ವಹಿಸಿತ್ತು. ಪ್ರಕರಣ ಸಂಬಂಧ ಈವರೆಗೂ 8 ಬಂದಿ ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos