ನವದೆಹಲಿ: ಉತ್ತರ ಪ್ರದೇಶ ಉನ್ನಾವ್ ಅತ್ಯಾಚಾರ ಪ್ರಕರಣ ಸಂಬಂಧ ಸಿಎಂ ಯೋಗಿ ಆದಿತ್ಯಾನಾಥ್ ವಿರುದ್ದ ಟೀಕಾಪ್ರಹಾರ ನಡೆಸಿರುವ ಕಾಂಗ್ರೆಸ್, ಸಿಎಂ ಯೋಗಿ ಆದಿತ್ಯಾನಾಥ್ ಅವರೇ ಪ್ರಕರಣದ ನಿಜವಾದ ಅಪರಾಧಿ ಎಂದು ಗಂಭೀರ ಆರೋಪ ಮಾಡಿದೆ.
ಈ ಬಗ್ಗೆ ಸಿಎಂ ಯೋಗಿ ಹಾಗೂ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲಾ ಅವರು, ಯೋಗಿ ಆದಿತ್ಯಾನಾಥ್ ಉನ್ನಾವ್ ಪ್ರಕರಣ ನಿಜವಾದ ಅಪರಾಧಿಯಾಗಿದ್ದಾರೆ. ಕೂಡಲೇ ಅವರನ್ನು ಸಿಎಂ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಮಹಿಳೆಯರ ಪಾಲಿಗೆ ರಾವಣರಾಜ್ಯವಾಗಿ ಬದಲಾಗಿದ್ದು. ಇಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ದಲಿತರು, ರೈತರು ಬಿಜೆಪಿ ಆಡಳಿತದಲ್ಲಿ ನರಕ ಅನುಭವಿಸುತ್ತಿದ್ದು, ಬಿಜೆಪಿ ಸರ್ಕಾರ ಅತ್ಯಾಚಾರಿಗಳಿಗೆ ತನ್ನ ರಕ್ಷಣೆ ಮುಂದುವರೆಸಿದೆ. ಯೋಗಿ ಆದಿತ್ಯಾನಾತ್ ಸರ್ಕಾರಕ್ಕೆ ಅತ್ಯಾಚಾರಿಗಳನ್ನು ರಕ್ಷಿಸುವ ಮತ್ತು ಸಂತ್ರಸ್ಥರನ್ನು ಅವಮಾನಿಸುವ ಕಲೆ ತುಂಬಾ ಚೆನ್ನಾಗಿ ಕರಗತವಾಗಿದೆ. ಅತ್ಯಾಚಾರಿಗಳ ಬೆಂಬಲಿಸಿ ಪ್ರಕರಣದಲ್ಲಿ ಪಿತೂರಿ ನಡೆಸಲಾಗಿದೆ ಎಂಬ ಆರೋಪ ಮಾಡುತ್ತಿದೆ.
ಅಲಹಾಬಾದ್ ನ್ಯಾಯಾಲಯ ಅತ್ಯಾಚಾರ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಗಣಿಸಬೇಕಿದ್ದು, ಹೇಗೆ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಪ್ರಕರಣ ಸಂಬಂಧ ಮೂಕ, ಕಿವುಡರಾಗಿದ್ದಾರೆ ಎಂಬುದನ್ನು ಗಮನಿಸಬೇಕು. ಇಂತಹ ಹೀನ ಕೃತ್ಯಗಳು ಸಂಭವಿಸಿದ ಮೇಲೂ ಅತ್ಯಾಚಾರಿ ಶಾಸಕನ ರಕ್ಷಣೆಗೆ ಬಿಜೆಪಿ ಮುಂದಾಗಿದೆ ಎಂದು ಸುರ್ಜೇವಾಲಾ ಹೇಳಿದರು.
ಇನ್ನು ಉನ್ನಾವ್ ಅತ್ಯಾಚಾರ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಪ್ರಕರಣದ 2ನೇ ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.