ದೇಶ

ಅತ್ಯಾಚಾರ ಪ್ರಕರಣ: ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ, ಶಿಕ್ಷೆ ಪ್ರಮಾಣ ಕೇಳಿ ಕುಸಿದ ಸ್ವಯಂ ಘೋಷಿತ ದೇವಮಾನವ

Srinivasamurthy VN
ಜೋದ್ ಪುರ: ಆಶ್ರಮದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋದ್ ಪುರ ನ್ಯಾಯಾಲಯ ಶಿಕ್ಷೆ ಪ್ರಮಾಣ ಘೋಷಣೆ ಮಾಡಿದ್ದು, ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಇಂದು ಬೆಳಗ್ಗೆಯಷ್ಟೇ ಪ್ರಕರಣ ಸಂಬಂಧ ತೀರ್ಪು ನೀಡಿದ್ದ ಜೋದ್ ಪುರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನ್ಯಾಯಾಲಯದ ನ್ಯಾಯಾಧೀಶರಾದ ಮಧುಸೂದನ್ ಶರ್ಮಾ ಅವರು ಈಗ ಶಿಕ್ಷೆ ಪ್ರಮಾಣ ಪ್ರಕಟ ಮಾಡಿದ್ದು, ಪ್ರಮುಖ ದೋಷಿ ಅಸರಾಂ ಬಾಪುಗೆ ಜೀವಾವಧಿ ಶಿಕ್ಷೆ ನೀಡಿದೆ. ಅಂತೆಯೇ ಪ್ರಕರಣದ ಇತರೆ ಇಬ್ಬರು ದೋಷಿಗಳಾದ ಶಿಲ್ಪಿ ಮತ್ತು ಶರದ್​ ಅವರಿಗೆ ತಲಾ 20 ವರ್ಷ ಶಿಕ್ಷೆಯನ್ನು  ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಶಿಕ್ಷೆ ಪ್ರಮಾಣ ಕೇಳಿ ಕುಸಿದ ದೇವಮಾನವ
ಇನ್ನು ಅತ್ತ ನ್ಯಾಯಾಧೀಶರು ಶಿಕ್ಷೆ ಪ್ರಮಾಣ ಘೋಷಣೆ ಮಾಡುತ್ತಿದ್ದಂತೆಯೇ ಇತ್ತ ನ್ಯಾಯಾಧೀಶರನ್ನು ಆಲಿಸುತ್ತಿದ್ದ ಸ್ವಯಂಘೋಷಿತ ದೇವಮಾನವ  ಆಘಾತದಿಂದ ಕುಸಿದು ಬಿದ್ದರು. ಬಳಿಕ ಸಹಾಯಕ ನೆರವಿನಿಂದ ಮೇಲೆದ್ದ ಅಸರಾಂ ಬಾಪು,  ತಿನ್ನುತ್ತೇನೆ, ಕುಡಿಯುತ್ತೇನೆ ಮತ್ತು ಸಂತೋಷ ಪಡುತ್ತೇನೆ.. ಏಕೆಂದರೆ ನಾನು ನನ್ನ ಶೇಷ ಜೀವನವನ್ನು ಇಲ್ಲೇ ಕಳೆಯಬೇಕಾಗಿದೆ ಎಂದು ಭಾವುಕರಾಗಿ ಹೇಳಿದರು ಎನ್ನಲಾಗಿದೆ. 
ಬುಧವಾರ ಬೆಳಗ್ಗೆ ನ್ಯಾಯಾಧೀಶ ಮಧುಸೂದನ್​ ಶರ್ಮಾ ಅವರು ಅತ್ಯಾಚಾರ ಪ್ರಕರಣದ ಆರೋಪಿಗಳ ಪೈಕಿ ಅಸಾರಾಂ ಬಾಪು ಮತ್ತು ಇತರ ಇಬ್ಬರು ದೋಷಿಗಳು ಎಂದು ತೀರ್ಪು ನೀಡಿದ್ದರು. ಅಸಾರಾಂ ಬಾಪು ನನ್ನು 2013 ಸೆಪ್ಟೆಂಬರ್ 1ರಂದು ಇಂದೋರ್​ನಲ್ಲಿ ಬಂಧಿಸಲಾಗಿತ್ತು. ಆ ನಂತರ ಆತನನ್ನು ಜೋಧ್​ಪುರ ಕಾರಾಗೃಹಕ್ಕೆ ರವಾನಿಸಲಾಗಿತ್ತು. ಪ್ರಸ್ತುತ ಆತ ಜೋಧ್ ​ಪುರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.
ಆಶ್ರಮದಲ್ಲಿ ಅಸಾರಾಂ ಬಾಪು ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿ 16 ವರ್ಷದ ವಿದ್ಯಾರ್ಥಿನಿ ಸ್ವಯಂ ಘೋಷಿತ ದೇವಮಾನವನ ವಿರುದ್ಧ ಕೇಸ್ ದಾಖಲಿಸಿದ್ದಳು. ರಾಜಸ್ಥಾನ ಆಶ್ರಮದಲ್ಲಿ ವಾಸಿಸುತ್ತಿದ್ದ ಬಾಲಕಿಯನ್ನು ಸ್ವಯಂಘೋಷಿತ ದೇವಮಾನವ ನಿರಂತರವಾಗಿ ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿದ್ದ. ಈ ಪ್ರಕರಣ ಸಂಬಂಧ ಜೋಧಪುರ ಪೊಲೀಸರು ಅಸಾರಾಂನನ್ನು 2013ರ ಆಗಸ್ಟ್ 31ರಂದು ಬಂಧಿಸಿದ್ದರು. ಅಂದಿನಿಂದಲೂ ಅವರು ಜೈಲಿನಲ್ಲಿದ್ದಾರೆ.
ಇನ್ನು ಪ್ರಕರಣ ಸಂಬಂಧ 9 ಮಂದಿ ಸಾಕ್ಷಿವ ಹೇಳಿದ್ದರು. ಈ ಪೈಕಿ 3 ಮಂದಿ ಅಸರಾಂಬಾಪು ಅನುಯಾಯಿಗಳ ದಾಳಿಯಲ್ಲಿ ಸಾವನ್ನಪ್ಪಿದ್ದರು.
SCROLL FOR NEXT