ಹೈದರಾಬಾದ್: ಮಾಧ್ಯಮಗಳ ವರದಿಗಳನ್ನು ಟೀಕಿಸಿ ಟ್ವಿಟರ್ ನಲ್ಲಿ ಲೇಖನ ಬರೆಯುತ್ತಿದ್ದಾರೆ ಎಂದು ಆರೋಪಿಸಿ ಆಂಧ್ರ ಪ್ರದೇಶ ಪತ್ರಕರ್ತರ ಸಂಘ ನೀಡಿದ್ದ ದೂರಿನ ಆಧಾರದ ಮೇಲೆ ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಪತ್ರಕರ್ತರ ಸಂಘ ನೀಡಿದ್ದ ದೂರಿನ ಆಧಾರದ ಮೇರೆಗೆ ಇದೀಗ ಹೈದರಾಬಾದ್ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದು, ಪವನ್ ವಿರುದ್ಧ ಐಪಿಸಿ ಸೆಕ್ಷನ್ 469 (ನಕಲಿ ದಾಖಲೆ ಸೃಷ್ಟಿಸಿ ವ್ಯಕ್ತಿ ಅಥವಾ ಸಂಸ್ಥೆಯ ಗೌರವಕ್ಕೆ ಧಕ್ಕೆ ತರುವುದು), 504 (ಉದ್ದೇಶ ಪೂರ್ವಕವಾಗಿ ಶಾಂತಿ ಕದಡುವುದು) ಮತ್ತು 506 (ಜೀವ ಬೆದರಿಕೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಸ್ಟಿಂಗ್ ಕೌಚ್ ವಿವಾದ ಆಂಧ್ರ ಪ್ರದೇಶದಲ್ಲಿ ತಲ್ಲಣ ಸೃಷ್ಟಿ ಮಾಡಿದ್ದು, ಈ ಸಂಬಂಧ ಹೋರಾಟ ನಡೆಸುತ್ತಿರು ನಟಿ ಶ್ರೀರೆಡ್ಡಿ ನೀಡಿದ್ದ ಹೇಳಿಕೆ ಇದೀಗ ತೆಲುಗು ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಈ ಹಿಂದೆ ನಟ ಪವನ್ ಕಲ್ಯಾಣ್ ಅವರು, ಕಾಸ್ಟಿಂಗ್ ಕೌಚ್ ಕುರಿತ ತಮ್ಮ ಪ್ರತಿಭಟನೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದ ನಟಿ ಶ್ರೀರೆಡ್ಡಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಯಾರಾದರೂ ಪಲ್ಲಂಗಕ್ಕೆ ಕರೆದರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಂದು ಹೇಳಿದ್ದ ಪವನ್ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ನಟಿ ಶ್ರೀರೆಡ್ಡಿ, 'ಪೊಲೀಸ್ ದೂರು ನೀಡುವುದು ನಮಗೇನು ಗೊತ್ತಿಲ್ಲವೇ.. ನೀವು ಚಿತ್ರರಂಗದ ಪವರ್ ಫುಲ್ ನಾಯಕರು. ನಿಮ್ಮಿಂದ ನಮ್ಮ ಸಮಸ್ಯೆ ನೀಗುತ್ತದೆ ಎಂದು ಕೊಂಡರೆ ಉಡಾಫೆ ಉತ್ತರ ನೀಡುತ್ತೀರಾ.. ಇಷ್ಟು ದಿನ ನಿಮ್ಮನ್ನು ಅಣ್ಣಾ ಎಂದು ಕರೆಯುತ್ತಿದ್ದೆವು.. ಆ ಗೌರವ ನೀವು ಉಳಿಸಿಕೊಂಡಿಲ್ಲ ಎಂದು ಹೇಳಿ ಪವನ್ ವಿರುದ್ಧ ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದಲ್ಲದೇ ಪವನ್ ಕಲ್ಯಾಣ್ ತಾಯಿಯನ್ನೂ ಕೂಡ ಅಶ್ಲೀಲವಾಗಿ ನಿಂದಿಸಿದ್ದರು.
ನಟಿ ಶ್ರೀರೆಡ್ಡಿಯ ಈ ವರ್ತನೆ ಪವನ್ ಕಲ್ಯಾಣ್ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ಇಂಬು ನೀಡುವಂತೆ ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಕೂಡ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದು ತಮ್ಮ ತಾಯಿಯನ್ನು ನಿಂದಿಸಿದ ಪ್ರಕರಣದ ಹಿಂದೆ ರಾಜಕೀಯ ಷಡ್ಯಂತ್ರವಿದ್ದು, ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹಾಗೂ ಶ್ರೀರೆಡ್ಡಿಯನ್ನು ಬಳಕೆ ಮಾಡಿಕೊಂಡು ತಮ್ಮ ತೇಜೋವಧೆಗೆ ಯತ್ನಿಸಲಾಗುತ್ತಿದೆ. ಇದಕ್ಕಾಗಿ ಆರ್ ಜಿವಿ ಮತ್ತು ಇತರರಿಗೆ ಸಿಎಂ ನಾಯ್ಜು ಪುತ್ರ ಲೋಕೇಶ್ 5 ಕೋಟಿ ಹಣ ನೀಡಿದ್ದಾರೆ ಎಂದು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಅತ್ತ ಪವನ್ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಇತ್ತ ಅವರ ಅಭಿಮಾನಿಗಳು ಬೀದಿಗಿಳಿದು ಹೋರಾಟ ನಡೆಸಿದರು. ನೋಡ ನೋಡುತ್ತಿದ್ದಂತೆಯೇ ಪ್ರತಿಭಟನೆ ವ್ಯಾಪಕ ಹಿಂಸಾಚಾರಕ್ಕೆ ತಿರುಗಿತು. ಇದೇ ವೇಳೆ ಪ್ರತಿಭಟನೆಯನ್ನು ವರದಿ ಮಾಡಲು ಬಂದಿದ್ದ ನಟಿ ಶ್ರೀರೆಡ್ಡಿ ಹೋರಾಟವನ್ನು ಬೆಂಬಲಿಸುತ್ತಿದ್ದ ಕೆಲ ಸುದ್ದಿವಾಹಿನಿಗಳ ಓಬಿ ವಾಹನಗಳು ಮತ್ತು ಪತ್ರಕರ್ತರ ಮೇಲೂ ಪ್ರತಿಭಟನಾಕಾರರು ದಾಳಿ ಮಾಡಿದ್ದರು. ಈ ಘಟನೆಯನ್ನು ತೆಲುಗು ಪತ್ರಕರ್ತರ ಸಂಘ ಮತ್ತು ಆಂಧ್ರ ಪ್ರದೇಶ ಮತ್ತು ತೆಲಂಗಾಣ ಪತ್ರಕರ್ತರ ಸಂಘಗಳು ತೀವ್ರವಾಗಿ ಟೀಕಿಸಿದ್ದವು.
ಪವನ್ ಮತ್ತು ಬೆಂಬಲಿಗರ ವಿರುದ್ಧ ದೂರು ನೀಡಿತ್ತು. ಇದೀಗ ಈ ಪ್ರಕರಣ ಸಂಬಂಧ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪವನ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.