ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಜನಾಕ್ರೋಶ ರ್ಯಾಲಿ ವೇಳೆ ವರದಿ ಮಾಡುತ್ತಿದ್ದ ಮಾಧ್ಯಮದವರಿಗೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ.
ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜನಾಕ್ರೋಶ ರ್ಯಾಲಿಯನ್ನು ನಡೆಸಿದ್ದರು. ಈ ವೇಳೆ 2 ಲಕ್ಷ ಕಾರ್ಯಕರ್ತರನ್ನು ಮೈದಾನದಲ್ಲಿ ಸೇರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಮೈದಾನದಲ್ಲಿ ಕಾರ್ಯಕರ್ತರಿಲ್ಲದೆ ರ್ಯಾಲಿ ಬಿಕೋ ಎನ್ನುತ್ತಿತ್ತು.
ಈ ಕುರಿತು ಜೆಕೆ ನ್ಯೂಸ್ 24X7 ಚಾನೆಲ್ ಮಾಧ್ಯಮ ವರದಿಗಾರರು ಖಾಲಿ ಕುರ್ಚಿಗಳನ್ನು ತೋರಿಸಿ ವರದಿ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಕಾಂಗ್ರೆಸ್ ಕಾರ್ಯಕರ್ತರು ವರದಿ ಮಾಡದಂತೆ ಕ್ಯಾಮೆರಾ ಆಫ್ ಮಾಡುವಂತೆ ಧಮ್ಕಿ ಹಾಕಿದ್ದಾರೆ. ಇದಕ್ಕೆ ಬಗ್ಗದಿದ್ದಾಗ ತಮ್ಮ ಪಂಚೆಯನ್ನು ಬಿಚ್ಚಿ ಕ್ಯಾಮೆರಾಗೆ ಅಡ್ಡ ಹಿಡಿದಿದ್ದಾರೆ.
2019ರ ಲೋಕಸಭಾ ಚುನಾವಣೆ ಹಿನ್ನಲೆ ಈಗಿಂದಲೇ ಕಾಂಗ್ರೆಸ್ ಭರಪೂರ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಪ್ರಧಾನಿ ಮೋದಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತೋರಿಸುವ ಸಲುವಾಗಿ ಜನಾಕ್ರೋಶ ರ್ಯಾಲಿಯನ್ನು ನಡೆಸುತ್ತಿದ್ದಾರೆ.
ರಾಮ್ ಲೀಲಾ ಮೈದಾನದಲ್ಲಿ ನಡೆದ ರ್ಯಾಲಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿ ಭಾಗಿಯಾಗಿದ್ದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು.