ಮಾರ್ಗ ಮಧ್ಯದಲ್ಲೆ ಶೌಚಾಲಯದ ತ್ಯಾಜ್ಯ ವಿಲೇವಾರಿ: ಡಿಜಿಸಿಎಗೆ ಎನ್ ಜಿಟಿ ತರಾಟೆ
ನವದೆಹಲಿ: ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಣೆ ಮಾಡುವ ವಿಮಾನಗಳಿಗೆ ಮಾರ್ಗ ಮಧ್ಯದಲ್ಲೆ ಶೌಚಾಲಯದ ತ್ಯಾಜ್ಯ ವಿಲೇವಾರಿ ಮಾಡದಂತೆ ಸೂಚನೆ ನೀಡುವುದರ ಸಂಬಂಧ ಡಿಜಿಸಿಎಯನ್ನು ಎನ್ ಜಿಟಿ ತರಾಟೆಗೆ ತೆಗೆದುಕೊಂಡಿದೆ.
ವೈಮಾನಿಕ ಮಾರ್ಗದ ಮಧ್ಯೆ ಶೌಚಾಲಯದ ತ್ಯಾಜ್ಯ ವಿಲೇವಾರಿ ಮಾಡದಂತೆ ಎಲ್ಲಾ ವಿಮಾನಗಳಿಗೂ ಸೂಚನೆ ನೀಡುವ ವಿಚಾರದಲ್ಲಿ ನಾಗರಿಕ ವಿಮಾನಯಾನದ ನಿರ್ದೇಶಕರ ಕಚೇರಿ ವಿಳಂಬ ತೋರುತ್ತಿದ್ದು ನಿಯಮಗಳನ್ನು ಉಲ್ಲಂಘಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹಸಿರು ನ್ಯಾಯಾಧಿಕರಣ ಅಸಮಾಧಾನಗೊಂಡಿದೆ.
ವಿಮಾನಗಳಿಗೆ ಆ.31 ರೊಳಗೆ ಸೂಚನೆ ನೀಡದೇ ಇದ್ದಲ್ಲಿ ನಾಗರಿಕ ವಿಮಾನಯಾನದ ನಿರ್ದೇಶಕರ ವೇತವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಎನ್ ಜಿಟಿಯ ಅಧ್ಯಕ್ಷ ನ್ಯಾ. ಆದರ್ಶ್ ಕುಮಾರ್ ಗೋಯಲ್ ಎಚ್ಚರಿಕೆ ನೀಡಿದ್ದಾರೆ. ಇದಾದ ಬಳಿಕವೂ ನಿರ್ದೇಶಕರು ಯಾವುದೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದೂ ಎಚ್ಚರಿಸಿದೆ.
ವೈಮಾನಿಕ ಮಾರ್ಗದ ಮಧ್ಯೆ ಶೌಚಾಲಯದ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದರಿಂದ ತಮ್ಮ ಸುತ್ತಮುತ್ತಲು ಇರುವ ಮನೆಗಳಿಗೆ ಹಾನಿ ಉಂಟಾಗುತ್ತಿದೆ ಎಂದು ದೆಹಲಿಯ ನಿವಾಸಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಸತ್ವಂತ್ ಸಿಂಗ್ ಧಿಯಾ ಎನ್ ಜಿಟಿ ಮೆಟ್ಟಿಲೇರಿದ್ದರು. ಈ ವಿಚಾರಣೆ ನಡೆಸಿದ್ದ ಹಸಿರು ನ್ಯಾಯಾಧಿಕರಣ ಎಲ್ಲಾ ವಿಮಾನಗಳಿಗೂ ವೈಮಾನಿಕ ಮಾರ್ಗದ ಮಧ್ಯೆ ಶೌಚಾಲಯದ ತ್ಯಾಜ್ಯ ವಿಲೇವಾರಿ ಮಾಡದಂತೆ ಸೂಚನೆ ನೀಡಲು ಡಿಜಿಸಿಎ ಗೆ 2016 ರ ಡಿ.20 ರಂದು ಸೂಚನೆ ನೀಡಿತ್ತು. ಆದರೆ ವಿಮಾನದ ಶೌಚಾಲಯದಿಂದ ಮಾರ್ಗ ಮಧ್ಯದಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ವಾದಿಸಿದ್ದ ಡಿಜಿಸಿಎ, ಎನ್ ಜಿಟಿ ಆದೆಶವನ್ನು ಮರುಪರಿಶೀಲಿಸಬೇಕೆಂದು ಮನವಿ ಮಾಡಿತ್ತು. ಆದರೆ ಈಗ ಮತ್ತೆ ಡಿಜಿಸಿಎಯನ್ನು ತರಾಟೆಗೆ ತೆಗೆದುಕೊಂಡಿರುವ ಎನ್ ಜಿಟಿ ಕೂಡಲೇ ಎಲ್ಲಾ ವಿಮಾನಗಳಿಗೂ ಸುತ್ತೋಲೆ ಹೊರಡಿಸುವಂತೆ ಸೂಚಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos