ರಾಜ್ಯಸಭಾ ಉಪಸಭಾಪತಿಯಾಗಿ ಎನ್'ಡಿಎ ಅಭ್ಯರ್ಥಿ ಹರಿವಂಶ ಸಿಂಗ್ ಆಯ್ಕೆ
ನವದೆಹಲಿ: ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಕೇಂದ್ರದ ಆಡಳಿತಾರೂಢ ಎನ್'ಡಿಎ ಪಕ್ಷದ ಅಭ್ಯರ್ಥಿ ಹರಿವಂಶ ಸಿಂಗ್ ಅವರು ಗುರುವಾರ ಗೆಲುವು ಸಾಧಿಸಿದ್ದಾರೆ.
ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಎನ್'ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ವಿರುದ್ಧ ಪ್ರತಿಪಕ್ಷದ ಅಭ್ಯರ್ಥಿಯಾಗಿ ಕರ್ನಾಟಕದ ಸಂಸದ ಬಿ.ಕೆ. ಹರಿಪ್ರಸಾದ್ ಅವರು ನಿಂತಿದ್ದರು.
ಪಿ.ಜೆ ಕುರಿಯನ್ ಅವರ ನಿವೃತ್ತಿ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ನಡೆದ ಮತದಾನದಲ್ಲಿ ಹರಿವಂಶ್ ನಾರಾಯಣ್ ಸಿಂಗ್ ಅವರು ಗೆಲವು ಸಾಧಿಸಿದ್ದಾರೆ.
ಒಟ್ಟು ಮತಗಳ ಪೈಕಿ ಹರಿವಂಶ ಅವರು 125 ಮತಗಳನ್ನು ಪಡೆಗು ಗೆಲವು ಸಾಧಿಸಿದ್ದರೆ, ಹರಿಪ್ರಸಾದ್ ಅವರು 105 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ರಾಜ್ಯಸಭೆ ಸಭಾಪತಿಯಾಗಿರುವ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಬಳಿಕ ಮತಕ್ಕೆ ಹಾಕಿದರು. ಸದಸ್ಯರು ತಾವು ಕುಳಿತ ಆಸನದ ಮುಂದಿದ್ದ ಗುಂಡಿಗಳನ್ನು ಒತ್ತುವ ಮೂಲಕ ಮತ ಚಲಾಯಿಸಿದರು. ಇದರಂತೆ ಒಟ್ಟು 202 ಮತಗಳು ಚಲಾವಣೆಯಾದವು. ಡಿಜಿಟಲ್ ಡಿಸ್ಪ್ಲೇ ಮೂಲಕ ಬಂದ ಮತಗಳಿಗೂ ಹಾಜರಿದ್ದ ಸದಸ್ಯರ ಸಂಖ್ಯೆಗೆ ತಾಳೆಯಾಗದ ಕಾರಣ ಸಭಾಧ್ಯಕ್ಷರು ಮತ್ತೊಮ್ಮೆ ಮತಕ್ಕೆ ಹಾಕಿ, ಗುಂಡಿ ಒತ್ತುವಂತೆ ಸೂಜಿಸಿದರು. 2ನೇ ಬಾರಿಗೆ 222 ಮತಗಳು ಚಲಾವಣೆಯಾದವು.
ಈ ವೇಳೆಯೂ ನಿಖರವಾದ ಸಂಖ್ಯೆ ಲಭ್ಯವಾಗಲಿಲ್ಲ. ಹೀಗಾಗಿ ಸಭಾಧ್ಯಕ್ಷು ಮತ ಚಲಾವಣೆಯಾಗದವರು ಚೀಟಿಯಲ್ಲಿ ಬರೆದಿ ತಿಳಿಸುವಂತೆ ಸೂಚಿಸಿದರು. ಎಲ್ಲವನ್ನೂ ಲೆಕ್ಕ ಹಾಕಿದ ಬಳಿಕ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.
ಬಳಿಕ ಎಲ್ಲಾ ಮತಗಳನ್ನು ಒಟ್ಟುಗೂಡಿಸಿದ ಬಳಿಕ ಹರಿವಂಶ ಸಿಂಗ್ ಅವರ ಪರ 124 ಮತಗಳು ಬಂದಿದ್ದು, ಹರಿಪ್ರಸಾದ್ ಪರವಾಗಿ 105 ಮತಗಳು ಬಂದಿವೆ. ಹರಿವಂಶ ನಾರಾಯಣ್ ಅವರು ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆಂದು ಪ್ರಕಟ ಮಾಡಿದರು.
ಉಭಯ ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸಿದರು. ಪ್ರತಿಪಕ್ಷಗಳಿಂದ ಎನ್'ಸಿಪಿ ಸಂಸದೆ ವಂದನಾ ಚವಾಣ್ ಅಭ್ಯರ್ಥಿಯಾಗಬಹುದು ಎನ್ನಲಾಗಿತ್ತಾದರೂ ಕೊನೇ ಕ್ಷಣದಲ್ಲಿ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸೂಚಿಸಿದ ಅಭ್ಯರ್ಥಿಯಾಗಿ ಹರಿಪ್ರಸಾದ್ ಹೊರಹೊಮ್ಮಿದರು.
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಅದರ ನೇತೃತ್ವದ ಎನ್'ಡಿಎಗೆ ಬಹುಮತವಿರಲಿಲ್ಲ. ಹೀಗಾಗಿ ಅನ್ಯಪಕ್ಷಗಳನ್ನು ಅದು ನೆಚ್ಚಿಕೊಂಡಿತ್ತು. ಎನ್'ಡಿಎಗೆ ಬಹುಮತವಿಲ್ಲ ಎಂಬುದನ್ನೇ ಪ್ರತಿಪಕ್ಷಗಳ ಕೂಟವು ಬಂಡವಾಳ ಮಾಡಿಕೊಂಡಿತ್ತು. ಬಹುಮತಕ್ಕೆ 123 ಸದಸ್ಯ ಬಲ ಬೇಕಿತ್ತು.
ಎನ್'ಡಿಎಗೆ ಶಿವಸೇನೆ, ಬಿಜು ಜನತಾದಳ ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ ಬೆಂಬಲ ನೀಡುವ ಸಾಧ್ಯತೆಗಳಿದ್ದ ಹಿನ್ನಲೆಯಲ್ಲಿ ತನ್ನ ಬಳಿ 129 ಮತಗಳಿವೆ ಎಂದು ಈ ಹಿಂದೆಯೇ ಎನ್'ಡಿಎ ಹೇಳಿಕೊಂಡಿತ್ತು. ಇದರಂತೆ ಅವಿಶ್ವಾಸ ನಿರ್ಣಯ ಮಂಡನೆ ಬಳಿಕ ರಾಜ್ಯಸಭಾ ಉಪಸಭಾಪತಿ ಸ್ಥಾನಕ್ಕೆ ಎದುರಾಗಿದ್ದ ಅಗ್ನಿ ಪರೀಕ್ಷೆಯಲ್ಲಿ ಮತ್ತೆ ಎನ್'ಡಿಎ ಗೆಲುವು ಸಾಧಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos