ನವದೆಹಲಿ: ವೈದ್ಯಕೀಯ ಸಂಶೋಧನೆಗೆ ಲೋಕಸಭೆ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿಯವರ ದೇಹವನ್ನು ದಾನ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತಂತೆ ಹೇಳಿಕೆ ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ಸೋಮನಾಥ್ ಚಟರ್ಜಿಯವರು ಹೈಕೋರ್ಟ್ ನಲ್ಲಿ ಸುದೀರ್ಘ ಕಾಲ ಕಳೆದಿದ್ದರು. ಚಟರ್ಜಿಯವರ ಪಾರ್ಥೀವ ಶರೀರವನ್ನು ಬೆಲ್ಲೆ ವ್ಯೂ ಕ್ಲಿನಿಕ್ ನಿಂದ ಹೈಕೋರ್ಟ್'ಗೆ ತೆಗೆದುಕೊಂಡು ಹೋಗಲಾಗುತ್ತದೆ. ನ್ಯಾಯಾಲಯದಿಂದ ರಾಜ್ಯ ವಿಧಾನಸಭೆಗೆ ಕರೆದೊಯ್ದು ಅಲ್ಲಿ ರಾಜ್ಯ ಸರ್ಕಾರದ ವತಿಯಿಂದ ಸಕಲ ಗೌರವಗಳನ್ನು ಸಲ್ಲಿಸಲಾಗುತ್ತದೆ.
ವಿಧಾನಸಭೆಯಲ್ಲಿ ಕೆಲ ಗಂಟೆಗಳ ಕಾಲ ಇರಿಸಿ, ನಂತರ ಚಟರ್ಜಿಯವರ ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಗುತ್ತದೆ. ಬಳಿಕ ವೈದ್ಯಕೀಯ ಸಂಶೋಧನೆಗಾಗಿ ಎಸ್ಎಸ್ಎಮ್ ಆಸ್ಪತ್ರೆಗೆ ದೇಹವನ್ನು ದಾನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಲೋಕಸಭೆಯ ಮಾಜಿ ಸ್ಪೀಕರ್ ಹಾಗೂ ಹಿರಿಯ ಕಮ್ಯೂನಿಸ್ಟ್ ಮುಖಂಡ ಸೋಮನಾಥ ಚಟರ್ಜಿಯವರು ತೀವ್ರ ಅನಾರೋಗ್ಯದಿಂದಾಗಿ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.
ಹತ್ತು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಸೋಮನಾಥ ಚಟರ್ಜಿ 13ನೇ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು.