ಕೊಟ್ಟಾಯಂ: ಚರ್ಚ್ ಪಾದ್ರಿಗಳು ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮತ್ತಿಬ್ಬರು ಪಾದ್ರಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಲೈಂಗಿಕ ಕಿರುಕುಳ ವಿಚಾರವಾಗಿ ಕೇರಳದ ಕೊಟ್ಟಾಯಂ ಬಳಿಯ ಮಲಂಕ್ಕಾರಾ ಆರ್ಥಡಾಕ್ಸ್ ಚರ್ಚಿನ ಮತ್ತಿಬ್ಬರು ಪಾದ್ರಿಗಳು ಪೊಲೀಸರಿಗೆ ಶರಣಾಗಿದ್ದು, ಶರಣಾದ ಪಾದ್ರಿಗಳನ್ನು ಅಬ್ರಹಂ ವರ್ಗೀಸ್ ಹಾಗು ಜೈಸೆ ಕೆ ಜಾರ್ಜ್ ಎಂದು ಗುರುತಿಸಲಾಗಿದೆ. ಇಬ್ಬರೂ ಪಾದ್ರಿಗಳನ್ನು ಕೊಲ್ಲಂ ಕ್ರೈಂ ಬ್ರಾಂಚ್ ಪೊಲೀಸರು ನ್ಯಾಯಾಲಯಕ್ಕೆ ಕರೆತಂದಿದ್ದಾರೆ.
ಇದೇ ಪ್ರಕರಣ ಸಂಬಂಧ ಇನ್ನಿಬ್ಬರು ಆರೋಪಿ ಪಾದ್ರಿಗಳಾದ ಜಾನ್ಸನ್ ವಿ ಮ್ಯಾಥ್ಯೂ ಹಾಗೂ ಜಾಬ್ ಮ್ಯಾಥ್ಯೂರನ್ನು ಪೊಲೀಸರು ಬಂಧಿಸಿದ್ದರು.
ಕೊಟ್ಟಾಯಂ ಬಳಿಯ ಮಲಂಕ್ಕಾರಾ ಆರ್ಥಡಾಕ್ಸ್ ಚರ್ಚನ ಪಾದ್ರಿಗಳು ವಿವಾಹಿತ ಮಹಿಳೆಯ ಜೀವನದ ಕೆಲ ರಹಸ್ಯಗಳನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಿ, ಆಕೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಅಲ್ಲದೆ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದ ನಾಲ್ವರು ಪಾದ್ರಿಗಳ ವಿಚಾರವಾಗಿ ಈ ಚರ್ಚ್ ಸಾಕಷ್ಟು ವಿವಾದಕ್ಕೆ ಈಡಾಗಿದೆ. ತನ್ನ ಬಳಿ ಸಾಕಷ್ಟು ಸಾಕ್ಷಿ ಇದೇ ಎಂದು ಹೇಳಿರುವ ಮಹಿಳೆಯ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ.