ತಿರುವನಂತಪುರಂ: ದೇವರನಾಡು ಕೇರಳದಲ್ಲಿ ಮತ್ತೆ ಮುಂಗಾರು ಮಳೆ ಆರ್ಭಟಿಸಿದ್ದು, ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ರಾಜ್ಯದ ಜನತೆ ತತ್ತರಿಸಿ ಹೋಗಿದೆ.
ಕೇರಳದ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಇಡುಕ್ಕಿ, ಮಲಪ್ಪುರಂ, ಕಂಜೂರ್, ಎರ್ನಾಕುಲಂ, ಕಲ್ಲಿಕೋಟೆ ಸೇರಿದಂತೆ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇತ್ತ ಭಾರಿ ಮಳೆಯಿಂದಾಗಿ ಮಲ್ಲಾಪೆರಿಯಾರ್ ಅಣೆಕಟ್ಟಿಗೆ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ಮಧ್ಯಾಹ್ನದ ವೇಳೆಗೆ ಡ್ಯಾಂ ಗರಿಷ್ಠ ಮಟ್ಟ ಅಂದರೆ 142 ಅಡಿ ತಲುಪಲಿದೆ. ಆಗ ಡ್ಯಾಂನ ಎಲ್ಲ 13 ಗೇಟ್ ಗಳನ್ನು ತೆರೆದು ನೀರನ್ನು ಹೊರ ಬಿಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಮುಲ್ಲಾ ಪೆರಿಯಾರ್ ಡ್ಯಾಂ ಸುತ್ತಮುತ್ತಲ ಪ್ರದೇಶದ ಗ್ರಾಮಗಳಲ್ಲಿ ಪ್ರವಾಹ ಭೀತಿ ಆರಂಭವಾಗಿದೆ.
ಇತ್ತ ಇಡುಕ್ಕಿ ಡ್ಯಾಂನಿಂದಲೂ ನೀರು ಬಿಡುವ ಪ್ರಕ್ರಿಯೆ ಮುಂದುವರೆದಿದ್ದು, ಎಲ್ಲ ಐದೂ ಗೇಟ್ ಗಳನ್ನು ತೆರೆದು ಅಪಾರ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇಲ್ಲಿ ಪ್ರತೀ ಒಂದು ಸೆಕೆಂಡಿಗೆ 8.5 ಲಕ್ಷ ಲೀಟರ್ ನೀರನ್ನು ಡ್ಯಾಂನಿಂದ ಹೊರಗೆ ಬಿಡಲಾಗುತ್ತಿದೆ. ಕೇರಳದ ಇತಿಹಾಸದಲ್ಲಿಯೇ ಇದೇ ಮೊದಲು ಎಂಬಂತೆ ಇಲ್ಲಿ ಬಾರಿ ಪ್ರಮಾಣದ ನೀರನ್ನು ನಿರಂತರವಾಗಿ ಹೊರಗೆ ಬಿಡಲಾಗುತ್ತಿದೆ. ಪರಿಣಾಮ ಇಡುಕ್ಕಿ ಡ್ಯಾಂ ಸುತ್ತಮುತ್ತಲ ಸುಮಾರು 50 ಗ್ರಾಮಗಳ 10 ಸಾವಿರಕ್ಕೂ ಅಧಿಕ ಮಂದಿ ಸಂತ್ರಸ್ಥರಾಗಿದ್ದಾರೆ.
ಇನ್ನು ಕೇರಳದಲ್ಲಿ ಮಳೆಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 47ಕ್ಕೇ ಏರಿಕೆಯಾಗಿದ್ದು, ಕಂಜೂರಿನಲ್ಲಿ ನಿನ್ನೆ ಮತ್ತೆ ಐದು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ರೆಡ್ ಅಲರ್ಟ್ ಘೋಷಣೆಯಾಗಿರುವ ಎಲ್ಲ 8 ಜಿಲ್ಲೆಗಳಲ್ಲೂ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ರಸ್ತೆ, ರೈಲು ಸಂಚಾರ ಸ್ಥಗಿತವಾಗಿದೆ. ಭಾರತೀಯ ಸೇನೆ ಮತ್ತು ಎನ್ ಡಿಆರ್ ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos