ನವದೆಹಲಿ: ಕವಿ ಹೃದಯದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಲ್ಲಿ ನೇರ, ನಿಷ್ಠುರ ನಡೆಯೂ ಇತ್ತು. ಇದ್ದದ್ದನ್ನು ಇದ್ದ ಹಾಗೆಯೇ ಹೇಳುವ ನೇರವಂತಿಕೆಯಿಂದಲೇ ಜನಮನ ಗೆದ್ದ ಪ್ರಧಾನಿ ಅವರು.
ಸರ್ಕಾರವನ್ನು ಪಾರದರ್ಶಕವಾಗಿ ನಡೆಸುವುದಷ್ಟೇ ಅಲ್ಲದೇ, ತಮ್ಮ ವ್ಯಕ್ತಿತ್ವವನ್ನೂ ಪಾರದರ್ಶಕವಾಗಿಟ್ಟುಕೊಂಡಿದ್ದ ವಾಜಪೇಯಿ, ತಾವು ಅವಿವಾಹಿತರಷ್ಟೇ, ಬ್ರಹ್ಮಚಾರಿಯಲ್ಲ ಎಂಬುದನ್ನು ನಿರ್ಭಿಡೆಯಿಂದ ಹೇಳಿದ್ದರು.
ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿದ್ದ ಆಟಲ್ ಜಿ ತಮ್ಮ ವಿವಾಹದ ಕುರಿತು ಮಾತನಾಡುತ್ತಾ, ಹಾಸ್ಯದ ಧಾಟಿಯಲ್ಲಿ ತಾವು ವಿವಾಹವಾಗಿಲ್ಲ, ಏಕೆಂದರೆ ಯಾವ ಮಹಿಳೆಯೂ ತಮ್ಮನ್ನು ವಿವಾಹವಾಗುವುದಕ್ಕೆ ಇಷ್ಟಪಡುತ್ತಿರಲಿಲ್ಲ ಎಂದಿದ್ದರು. ಅಟಲ್ ಜೀ ಅವರ ಬಹುಮುಖ ಪ್ರತಿಭೆಯ ವ್ಯಕ್ತಿತ್ವಕ್ಕೆ ಕವಿತ್ವ ಸಂಗೀತ, ಸಿನಿಮಾಯೆಡಿಗಿನ ಅವರ ಆಸಕ್ತಿಗಳೂ ಭೂಷಣವಾಗಿತ್ತು.