ನವದೆಹಲಿ: ನಕಲಿ ಹಾಗೂ ಪ್ರಚೋದನಕಾರಿ ವಾಟ್ಸ್ ಅಪ್ ಸಂದೇಶಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, ನಕಲಿ ಸಂದೇಶಗಳ ಮೂಲ ಪತ್ತೆಹಚ್ಚಲು ತಾಂತ್ರಿಕ ಪರಿಹಾರ ಕಂಡುಕೊಳ್ಳಿ ಎಂದು ವಾಟ್ಸ್ ಅಪ್ ಸಂಸ್ಥೆಗೆ ಸೂಚಿಸಿದೆ.
ವಾಟ್ಸ್ ಅಪ್ ಮುಖ್ಯಸ್ಥ ಕ್ರಿಸ್ ಡೇನಿಲ್ಸ್ ಅವರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು, ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಅಪ್ ಭಾರತದ ಡಿಜಿಟಲ್ ವ್ಯವಸ್ಥೆಗೆ ಸಾಕಷ್ಟು ಕೊಡುಗೆ ನೀಡಿದೆ. ಆದರೆ ಗುಂಪು ಹತ್ಯೆಗೆ ಪ್ರಚೋದನೆ ಮತ್ತು ಸೇಡಿನ ಅಶ್ಲೀಲತೆಯಂತಹ ಕೆಟ್ಟ ಬೆಳವಣಿಗೆಗಳಿಗೆ ಕಡಿವಾಣ ಹಾಕಬೇಕು ಎಂದಿದ್ದಾರೆ.
ಕ್ರಿಸ್ ಡೇನಿಲ್ಸ್ ಅವರೊಂದಿಗಿನ ಮಾತುಕತೆ ಫಲಪ್ರದವಾಗಿದೆ. ನಕಲಿ ಸಂದೇಶಗಳ ಮೂಲ ಪತ್ತೆಹಚ್ಚಲು ಪರಿಹಾರ ಕಂಡುಕೊಳ್ಳುವಂತೆ, ಸ್ಥಳೀಯ ಕಚೇರಿ ಸ್ಥಾಪಿಸುವಂತೆ ಹಾಗೂ ಭಾರತದ ಕಾನೂನುಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ವಾಟ್ಸ್ ಅಪ್ ಸಿಇಒಗೆ ಸೂಚಿಸಲಾಗಿದೆ ಎಂದರು.
ಇತ್ತೀಚಿಗಷ್ಟೇ ಸುಳ್ಳು ಮತ್ತು ಪ್ರಚೋದನಾತ್ಮಕ ಮೆಸೇಜ್ ಗಳಿಗೆ ಕಡಿವಾಣ ಹಾಕುತ್ತಿಲ್ಲ ಎಂದು ವಾಟ್ಸ್ ಅಪ್ ಬಗ್ಗೆ ಕೇಂದ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ವಾಟ್ಸ್ ಅಪ್ ಫಾರ್ವಡ್ ಮೆಸೇಜ್ ಗೆ ಮಿತಿ ವಿಧಿಸಿತ್ತು.