ತಿರುವನಂತಪುರಂ: ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಉಂತಾಗಿ ಭಾರೀ ಹಾನಿಯಾಗಿರುವ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಕೇರಳ ನೆರೆ, ಪ್ರವಾಹದಲ್ಲಿ ಸಾವನ್ನಪ್ಪಿರುವವರ ಬಗೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ವಪಕ್ಷ ಸಭೆ ಕರೆದಿದ್ದಾರೆ. ಮಂಗಳವಾರ ಸಂಜೆ ನಾಲ್ಕಕ್ಕೆ ಸಭೆ ನಡೆಯಲಿದೆ.
ಕೇಂದ್ರ ಸರ್ಕಾರ ಸೋಮವಾರದಂದು ಕೇರಳ ಪ್ರವಾಹವನ್ನು ಗಂಬೀರ ಸ್ವರೂಪದ ದುರಂತ ಎಂದು ಪರಿಗಣಿಸುವುದಾಗಿ ಕೇರಳ ಹೈಕೋರ್ಟ್ ಗೆ ತಿಳಿಸಿದೆ. ಆದರೆ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಯಾವ ನಿಬಂಧಗಳಿಲ್ಲ ಎಂದು ಸರ್ಕಾರ ಹೇಳಿಕೆ ನಿಡಿದೆ.
'ರಾಷ್ಟ್ರೀಯ ವಿಕೋಪ' ಎಂಬ ಶಬ್ದವು ಸಾಮಾನ್ಯ ಮಾತಿನಲ್ಲಿ ಬಳಸಲ್ಪಡುವ ಅಭಿವ್ಯಕ್ತಿಯಾಗಿದೆ, ಎಂದು ಭಾರತದ ಸಹಾಯಕ ಸಾಲಿಸಿಟರ್ ಜನರಲ್ ಎನ್.ನಾಗರೇಶ್ ಹೈಕೋರ್ಟ್ ಗೆ ತಿಳಿಸಿದ್ದಾರೆ.
ಅಧಿಕೃತ ಅಂಕಿ ಅಂಶಗಳ ಪ್ರಕಾರ ಆಗಸ್ಟ್ 8 ರಂದು ಪ್ರಾರಂಭವಾದ ಮಾನ್ಸೂನ್ ಮಳೆಯಿಂದಾಗಿ ಕೇರಳದಲ್ಲಿ ಇದುವರೆಗೆ 223 ಮಂದಿ ಸಾವನ್ನಪ್ಪಿದ್ದಾರೆ.