ನವದೆಹಲಿ: ಕೊಡಗು ಹಾಗೂ ಕೇರಳ ರಾಜ್ಯದಲ್ಲಿ ಭಾರೀ ಪ್ರವಾಹ ಹಾಗೂ ಭೂಕುಸಿತ ಸೃಷ್ಟಿಸಿ ನೂರಾರು ಮಂದಿಯನ್ನು ಬಲಿ ಪಡೆದುಕೊಂಡಿದ್ದ ಮಾರಣಾಂತಿಕ ಮಳೆಗೆ ಕಾರಣವೇನು ಎಂಬುದನ್ನು ಹವಾಮಾನ ತಜ್ಞರು ಪತ್ತೆ ಹಚ್ಚಿದ್ದಾರೆ.
ಕೊಡಗು ಹಾಗೂ ಕೇರಳ ರಾಜ್ಯವನ್ನು ಒಳಗೊಂಡಿರುವ ಪಶ್ಚಿಮಘಟ್ಟ ಶ್ರೇಣಿಯಲ್ಲಿ ಮುಂಗಾರು ತೀವ್ರಗೊಂಡಿದ್ದ ಸಂದರ್ಭದಲ್ಲಿಯೇ ಕೊಂಕಣದಿಂದ ಕೇರಳದವರೆಗಿನ ಪಶ್ಚಿಮ ಘಟ್ಟದಲ್ಲಿ ಹಾಗೂ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ವಾಯುಭಾರ ಕುಸಿತ, ಸೊಮಾಲಿ ಜೆಟ್ ನಿಂದಾಗಿ ಭಾರೀ ಮಳೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಈವರ್ಷದ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಸಾಮಾನ್ಯ ಸರಾಸರಿಗಿಂತ ಶೇ.15 ಮತ್ತು ಶೇ.18ರಷ್ಟು ಹೆಚ್ಚು ಮಳೆಯಾಗಿದ್ದರೆ, ಆ.1-19ರ ಅವಧಿಯಲ್ಲಿ ಶೇ.164ರಷ್ಟು ಹೆಚ್ಚು ಮಳೆ ಸುರಿದಿದೆ ಎಂದು ತಿಳಿಸಿದ್ದಾರೆ.
ಆಫ್ರಿಕಾ ಖಂಡದ ಆಗ್ನೇಯ ಭಾಗದ ಬಳಿ ಇರುವ ಮಡಗಾಸ್ಕರ್ ಎಂಬ ದ್ವೀಪ ದೇಶದ ಬಳಿ ಪ್ರತೀ ವರ್ಷ ಏಳುವ ಮಾರುತಗಳು ಉತ್ತರಾಭಿಮುಖವಾಗಿ ಸಾಗುತ್ತದೆ. ಬಳಿಕ ಮರುತಿರುವು ಪಡೆದು ಭಾರತದ ಪಶ್ಚಿಮಘಟ್ಟದತ್ತ ಬರುತ್ತದೆ. ಇದನ್ನೇ ಸೋಮಾಲಿ ಜೆಟ್ ಬೆಳವಣಿಗೆ ಎಂದು ಕರೆಯಲಾಗುತ್ತದೆ.
ಈ ಮಾರುತಗಳು ಭಾರತದಲ್ಲಿ ಮುಂಗಾರು ಮಳೆಗೆ ಹೆಚ್ಚಿನ ವೇಗ ಮತ್ತು ತೀವ್ರತೆಯನ್ನು ನೀಡುತ್ತದೆ. ಈ ಸೋಮಾಲಿ ಜೆಟ್ ಗಳು ಈ ವರ್ಷ ಕೂಡ ಆಗಸ್ಟ್ ಮೊದಲ ವಾರದಲ್ಲಿ ಪಶ್ಚಿಮ ಘಟ್ಟದತ್ತ ಸಾಗಿ ಬಂದಿದ್ದವು. ಹೀಗೆ ಸೋಮಾಲಿ ಜೆಟ್ ಗಳು ಬರುವಷ್ಟರಲ್ಲಿ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಮುಂಗಾರು ತೀವ್ರಗೊಂಡಿತ್ತು. ವಾಯುಭಾರ ಕುಸಿತವೂ ಉಂಟಾಗಿತ್ತು. ಇದರಿಂದಾಗಿ ಎಂದಿಗಿಂತ ಮಳೆ ಬಿರುಸು ಪಡೆದು ಸುರಿಯಲು ಆರಂಭವಾಗಿತ್ತು.
ಈ ನಡುವೆ ಒಡಿಶಾ ಬಳಿ ಎರಡು ಬಾರಿ ವಾಯುಭಾರ ಕುಸಿದ ಉಂಟಾಗ ಪರಿಣಾಮ ಅದು ಅರಬ್ಬೀ ಸಮುದ್ರದಿಂದ ಭಾರೀ ಗಾಳಿಯೆನ್ನು ಸೆಳೆದಿತ್ತು. ಹೀಗೆ ಅರಬ್ಬೀ ಸಮುದ್ರದಿಂದ ಸೆಳೆಯಲ್ಪಟ್ಟ ಗಾಳಿಯು, ಪಶ್ಚಿಮಘಟ್ಟದಲ್ಲಿ ತಡೆಯುಂಟಾಗಿ ಆಗಲೇ ಸುರಿಯುತ್ತಿದ್ದ ಮಳೆಗೆ ಮತ್ತಷ್ಟು ತೀವ್ರತೆಯನ್ನು ನೀಡಿದೆ.
ಇದೆಲ್ಲದರ ಪರಿಣಾಮ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮೋಡಗಳು ಸೃಷ್ಟಿಯಾಗಿ ಅನಾಹುತಕಾರಿ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆಯ ಅಧ್ಯಕ್ಷ ಜಿ.ಪಿ.ಶರ್ಮಾ ಅವರು ವಿವರಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos