ಕೇರಳ ಪ್ರವಾಹ: ಕೇಂದ್ರದಿಂದ 600 ಕೋಟಿ ಬಿಡುಗಡೆ, ಪರಿಹಾರ ಸಾಮಗ್ರಿಗಳ ಮೇಲಿನ ಜಿಎಸ್ ಟಿಗೆ ವಿನಾಯ್ತಿ
ನವದೆಹಲಿ: ಜಲಪ್ರವಾಹಕ್ಕೆ ತುತ್ತಾಗಿರುವ ಕೇರಳಕ್ಕೆ ಕೇಂದ್ರ ಸರ್ಕಾರ 600 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಸಂತ್ರಸ್ತರಿಗೆ ತಲುಪಿಸಲು ತರಿಸಲಾಗುವ ಪರಿಹಾರ ಸಾಮಗ್ರಿಗಳ ಮೇಲಿನ ಜಿಎಸ್ ಟಿಗೆ ವಿನಾಯ್ತಿ ನೀಡಿದೆ.
ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್ ಸಿ ಎಂಸಿ) ಸತತ 6 ನೇ ದಿನ ಕೇರಳ ಪ್ರವಾಹಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ್ದು, ಈ ಸಭೆಯ ನಂತರ ಕೇಂದ್ರ ಸರ್ಕಾರ ಜಿಎಸ್ ಟಿ ಗೆ ವಿನಾಯ್ತಿ ನೀಡುವ ಘೋಷಣೆ ಮಾಡಿದೆ. ಕೇರಳದ ರಕ್ಷಣಾ ಕಾರ್ಯಾಚರಣೆ ಹಾಗೂ ಪರಿಸ್ಥಿತಿ ನಿರ್ವಹಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ 500 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ 100 ಕೋಟಿಗಳನ್ನು ಘೋಷಿಸಿದ್ದಾರೆ. ಎರಡೂ ಪರಿಹಾರ ಮೊತ್ತಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಸಂತ್ರಸ್ತರಿಗೆ ಅಗತ್ಯವಿರುವ ವಸ್ತುಗಳನ್ನು ಹೊರಗಿನಿಂದ ತರಿಸಿಕೊಳ್ಳಬೇಕಿದ್ದು, ಇದಕ್ಕಾಗಿ ವಿಧಿಸಲಾಗುವ ಸೀಮಾ ಸುಂಕ ಹಾಗೂ ಐಜಿಎಸ್ ತಿ ಗಳಿಗೆ ವಿನಾಯ್ತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇನ್ನು ಇದೇ ವೇಳೆ ಆಹಾರ ಪೂರೈಕೆ ಇಲಾಖೆ ರಾಜ್ಯ ಸರ್ಕಾರದ ಮನವಿಯ ಮೇರೆಗೆ ಸುಮಾರು 89,540 ಮೆಟ್ರಿಕ್ ಟನ್ ನಷ್ಟು ಹೆಚ್ಚುವರಿ ಅಕ್ಕಿಯನ್ನು ನೀಡಿದ್ದು, 100 ಮೆಟ್ರಿಕ್ ಟನ್ ನಷ್ಟು ಕಾಳುಗಳನ್ನು ಪೂರೈಕೆ ಮಾಡಲಾಗುತ್ತಿದೆ.
ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸುವುದಕ್ಕಾಗಿ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಈಗಾಗಲೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಕೋಟಿ ರೂಪಾಯಿ ನೆರವು ನೀಡಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos