ನವದೆಹಲಿ: ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಜಿ. ಸತೀಶ್ ರೆಡ್ಡಿ ಅವರನ್ನು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಮುಂದಿನ ಎರಡು ವರ್ಷ ಕಾಲ ಅವರು ಈ ಹುದ್ದೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ.
ಜೂನ್ ನಲ್ಲಿ ನಿವೃತ್ತರಾಗಿದ್ದ ಎಸ್. ಕ್ರಿಸ್ಟೋಫರ್ ಅವರ ಸ್ಥಾನಕ್ಕೆ ಸತೀಶ್ ಆಗಮಿಸಿದ್ದಾರೆ.
ಇದೇ ವೇಳೆ ಸತೀಶ್ ರೆಡ್ಡಿ ಅವರನ್ನು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಇಲಾಖೆ (ಡಿಡಿಆರ್&ಡಿ)ಯ ಕಾರ್ಯದರ್ಶಿಯನ್ನಾಗಿ ಸಹ ನೇಮಕ ಮಾಡಿ ಆದೇಶ ನಿಡಲಾಗಿದೆ.
ಸಂಪುಟದ ನೇಮಕಾತಿ ಸಮಿತಿ ರೆಡ್ಡಿ ಅವರನ್ನು ಎರಡು ವರ್ಷಗಳ ಅವಧಿಗೆ ಡಿಆರ್ಡಿಒ ಅಧ್ಯಕ್ಷರಾಗಿ ನೇಮಕ ಮಾಡಲು ಅನುಮತಿಸಿದೆ.
ಕ್ಷಿಪಣಿ ವ್ಯವಸ್ಥೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಹೆಸರಾಗಿರುವ ಸತೀಶ್ ರೆಡ್ಡಿ ಏರೋಸ್ಪೇಸ್ ಟೆಕ್ನಾಲಜೀಸ್ ಮತ್ತು ಕೈಗಾರಿಕೆಗಳ ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ.ಪ್ರಸ್ತುತ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವೈಜ್ಞಾನಿಕ ಸಲಹೆಗಾರರಾಗಿ ರೆಡ್ಡಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆಂಧ್ರಪ್ರದೇಶದ ಜವಹರಲಾಲ್ ನೆಹರೂ ಟೆಕ್ನಲಾಜಿಕಲ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿರುವ ಜಿ. ಸತೀಶ್ ರೆಡ್ಡಿಲಂಡನ್ನ ರಾಯಲ್ ಇನ್ಸ್ಟಿಟ್ಯೂಟ್ ಆಫ್ ನ್ಯಾವಿಗೇಷನ್, ಯುಕೆಯ ರಾಯಲ್ ಏರೋನಾಟಿಕಲ್ ಸೊಸೈಟಿ ಗಳಲ್ಲಿ ಸಂಶೊಧನೆ ವ್ಯಾಸಂಗ ಮಾಡಿದ್ದಾರೆ.
ರಷ್ಯಾ ಅಕಾಡೆಮಿ ಆಫ್ ನ್ಯಾವಿಗೇಷನ್ ಅಂಡ್ ಮೋಷನ್ ಕಂಟ್ರೋಲ್ ನ ಸದಸ್ಯರಾಗಿದ್ದ ರೆಡ್ಡಿ ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ, ಇಂಡಿಯನ್ ನ್ಯಾಷನಲ್ ಆಫ್ ಎಂಜಿನಿಯರಿಂಗ್, ಏರೋನಾಟಿಕ್ ಸೊಸೈಟಿ ಆಫ್ ಇಂಡಿಯಾ, ಯುಕೆಯ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಗಳಲ್ಲಿ ಸಂಶೋಧನೆಯಲ್ಲಿ ನಿರತರಾಗಿದ್ದರು.
ದೇಶ ವಿದೇಶಗಳಲ್ಲಿ ಸಂಶೋಧಕ, ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿರುವ ರೆಡ್ಡಿ ಅವರಿಗೆ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್ ನ ಹೋಮಿ ಜಹಂಗೀರ್ ಬಾಬಾ ಪ್ರಶಸ್ತಿ ಲಭಿಸಿದೆ. ಯುಕೆ ರಾಯಲ್ ಏರೋನಾಟಿಕ್ ಸೊಸೈಟಿ ಬೆಳ್ಳಿ ಪದಕ ಗಳಿಸಿದ್ದಾರೆ.ಐಇಐ ಇಂಡಿಯಾ ಹಾಗು ಐಇಇಇ ಅಮೆರಿಕಾ ಪುರಸ್ಕಾರಗಳು ಇವರಿಗೆ ಲಭಿಸಿದೆ.