ದೇಶ

ರಾಷ್ಟ್ರೀಯ ಭದ್ರತೆಯಿಂದ ರಾಜಕೀಯವನ್ನು ದೂರವಿಡಿ: ರಾಹುಲ್ ಗಾಂಧಿಗೆ ಕೇಂದ್ರ ಸಚಿವ ರಿಜಿಜು

Manjula VN
ನವದೆಹಲಿ: ಭೀಮಾ ಕೋರೋಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಾಂತಿಕಾರ ಬರಹಗಾರ ವರವರ ರಾವ್ ಬಂಧನ ಕುರಿತು ಕಾಳಜಿ ತೋರಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಬುಧವಾರ ತೀವ್ರವಾಗಿ ಕಿಡಿಕಾರಿದ್ದಾರೆ. 
ರಾಷ್ಟ್ರೀಯ ಭದ್ರತೆ ಹಿತಾಸಕ್ತಿಯಿಂದ ರಾಜಕೀಯವನ್ನು ದೂರವಿಡಿ ಎಂದು ರಾಹುಲ್ ಗಾಂಧಿಯವರಿಗೆ ಕಿರಣ್ ರಿಜಿಜು ಅವರು ಹೇಳಿದ್ದಾರೆ. 
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಈ ಹಿಂದೆ ಪ್ರಧಾನಮಂತ್ರಿಗಳಾಗಿದ್ದ ಡಾ.ಮನಮೋಹನ್ ಸಿಂಗ್ ಅವರೇ ನಕ್ಸಲು ದೇಶದ ಆಂತರಿಕ ಭದ್ರತೆಗೆ ನಂ.1 ಬೆದರಿಕೆಯಾಗಿದ್ದಾರೆಂದು ಹೇಳಿದ್ದರು. ಇದೀಗ ಕಾಂಗ್ರೆಸ್ ಅಧ್ಯಕ್ಷ ಬಹಿರಂಗವಾಗಿಯೇ ನಕ್ಸಲರ ಬಗ್ಗೆ ಕಾಳಜಿ ಹಾಗೂ ಸಹಾನುಭೂತಿ ತೋರಿಸುತ್ತಿದ್ದಾರೆ. ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ರಾಜಕೀಯ ವಿಚಾರವನ್ನು ದೂರವಿಡಿ ಎಂದು ಹೇಳಿಕೊಂಡಿದ್ದಾರೆ. 
ನಿನ್ನೆಯಷ್ಟೇ ಆರ್'ಎಸ್ಎಸ್ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದ ರಾಹುಲ್ ಗಾಂಧಿಯವರು, ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಐವರು ಹೋರಾಟಗಾರರನ್ನು ಬಂಧನಕ್ಕೊಳಪಡಿಸಿದ್ದರನ್ನು ಪ್ರಶ್ನಿಸಿದ್ದರು. 
ನವಭಾರತದಲ್ಲಿ ಕೇವಲ ಒಂದೇ ಒಂದು ಸರ್ಕಾರೇತರ ಸಂಘಟನೆಗೆ ಜಾಗವಿದೆ ಅದು ಆರ್ ಎಸ್ಎಸ್ ಎಂದು ಟೀಕಿಸಿದ್ದರು. 
ಭಾರತದಲ್ಲಿ ಕೇವಲ ಒಂದೇ ಒಂದು ಎನ್ ಜಿಒಗೆ ಸ್ಥಾನವಿದೆ, ಅದು ಆರ್ ಎಸ್ಎಸ್. ಬೇರೆಲ್ಲಾ ಎನ್ ಜಿಒಗಳನ್ನು ಮುಚ್ಚಿರಿ ಎಲ್ಲಾ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಿ ಮತ್ತು ದೂರು ಹೇಳುವವರನ್ನು ಆರೋಪಿಸುವವರನ್ನು ಗುಂಡಿಕ್ಕಿ ಕೊಲ್ಲಿ,  ನವಭಾರತಕ್ಕೆ ಸ್ವಾಗತ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು. 
SCROLL FOR NEXT