ಕನ್ನೌಜ್: ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಪತ್ನಿಯ ಚಿಕಿತ್ಸೆಗಾಗಿ ಹಣ ಹೊಂದಿಸಲು ಸಾಧ್ಯವಾಗದ ವ್ಯಕ್ತಿಯೊಬ್ಬ ತನ್ನ ಮೂರು ವರ್ಷದ ಹೆಣ್ಣು ಮಗುವನ್ನು ಮಾರಲು ಮುಂದಾದಾಗ ಮಾನವೀಯತೆ ಮೆರೆದ ಪೊಲೀಸರು ವ್ಯಕ್ತಿಗೆ ಸಹಾಯ ಮಾಡಿ ಮಗು ಮಾರಾಟ ಮಾಡದಂತೆ ತಡೆದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ಕನ್ನೌಜ್'ನ ಬರೇತಿ ದರಾಪುರ್ ಗ್ರಮಾದ ಅರವಿಂದ್ ಬಂಜಾರಾ ಮಗುವನ್ನು ಮಾರಾಟ ಮಾಡಲು ಯತ್ನಿಸಿದ್ದ ವ್ಯಕ್ತಿಯೆಂದು ಹೇಳಲಾಗುತ್ತಿದೆ.
ಪತ್ನಿ ಸುಖ್'ದೇವಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದಳು. ಹೀಗಾಗಿ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಲು ಮುಂದಾದ ವೈದ್ಯರು ರಕ್ತ ಹೊಂದಿರುವಂತೆ ತಿಳಿಸಿದ್ದಾರೆ. ಈ ವೇಳೆ ಹಣವಿಲ್ಲದೆ ಪರದಾಡಿದ ಅರವಿಂದ್ ಅವರು ಬೇರಾವುದೇ ದಾರಿಯಿಲ್ಲದೇ ಮಗುವನ್ನು ರೂ.25 ಸಾವಿರಕ್ಕೆ ಮಾರಾಟ ಮಾಡಲು ನಿರ್ಧಾರ ತೆಗೆದುಕೊಂಡಿದ್ದಾರೆ.
ಮಗುವನ್ನು ಮಾರಾಟ ಮಾಡುತ್ತಿದ್ದ ವಿಚಾರ ತಿಳಿದ ಪೊಲೀಸರು ವ್ಯಕ್ತಿಯನ್ನು ತಡೆದು ಚಿಕಿತ್ಸೆಗೆ ಅಗತ್ಯವಿದ್ದ ಹಣವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ರಕ್ತವನ್ನು ಹೊಂದಿರುವಂತೆ ವೈದ್ಯರು ತಿಳಿಸಿದ್ದರು. ರಕ್ತವನ್ನು ಹೊಂದಿಸದೇ ಹೋದರೆ ಪತ್ನಿ ಬದುಕುವುದಿಲ್ಲ ಎಂದು ತಿಳಿಸಿದ್ದರು. ನನ್ನ ಬಳಿ ಹಣವಿರಲಿಲ್ಲ. ಹೀಗಾಗಿ ಬೇರಾವುದೇ ದಾರಿಯಿಲ್ಲದೆ ಮಗುವನ್ನು ಮಾರಾಟ ಮಾಡಲು ನಿರ್ಧರಿಸಿದ್ದೆ ಎಂದು ಅರವಿಂದ್ ಅವರು ಹೇಳಿದ್ದಾರೆ.
ಮಗುವನ್ನು ಮಾರಾಟ ಮಾಡುವುದು ಅತ್ಯಂತ ಸುಲಭ. ಆದರೆ, ನಮಗೆ ಬೇರಾವುದೇ ದಾರಿಯಿರಲಿಲ್ಲ. ಚಿಕಿತ್ಸೆಗಾಗಿ ನಾವು ಈ ಹಿಂದೆ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೆವು ಎಂದು ಸುಖ್'ದೇವಿ ಅವರು ತಿಳಿಸಿದ್ದಾರೆ.
ಚಿಕಿತ್ಸೆಗೆ ಹಣದ ಅಗತ್ಯವಿದ್ದು, ಹಣವಿಲ್ಲದ ಕಾರಣ ದಂಪತಿಗಳು ಮಗುವನ್ನು ಮಾರಾಟ ಮಾಡುತ್ತಿದ್ದಾರೆಂಬ ವಿಚಾರ ತಿಳಿದುಬಂದಿತ್ತು. ಹೀಗಾಗಿ ಕುಟುಂಬಕ್ಕೆ ಸಹಾಯ ಮಾಡಲು ನಿರ್ಧರಿಸಿದ್ದೆವು. ಇದೀಗ ಮಹಿಳೆಯ ಚಿಕಿತ್ಸೆಯ ಎಲ್ಲಾ ವೆಚ್ಚವನ್ನು ನಾವೇ ಭರಿಸುತ್ತಿದ್ದೇವೆ. ಹಣವಷ್ಟೇ ಅಲ್ಲದೆ, ಮಹಿಳೆಗೆ ರಕ್ತ ನೀಡುವ ಕೆಲಸವನ್ನು ಮಾಡುತ್ತಿದ್ದೇವೆಂದು ತಿರ್ವಾ ಪೊಲೀಸ್ ಠಾಣೆಯ ಅಧಿಕಾರಿ ಅಮೋದ್ ಕುಮಾರ್ ಸಿಂಗ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos