ತಿರುವನಂತಪುರ: ಶಬರಿಮಲೆ ದೇವಾಲಯದ ತಂತ್ರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇರಳ ಲೋಕೋಪಯೋಗಿ ಸಚಿವ ಹಾಗೂ ಸಿಪಿಐಎಂ ಮುಖ್ಯಸ್ಥ ಜಿ.ಸುಧಾಕರನ್ ಅವರು, ಶಬರಿಮಲೆಯಲ್ಲಿ ತಂತ್ರಿಗಳಿಗಿಂತ ಅಲ್ಲಿನ ಕತ್ತೆಗಳೇ ಹೆಚ್ಚಾಗಿ ಸೇವೆ ಸಲ್ಲಿಸುತ್ತವೆ. ಹೀಗಾಗಿ ಅವುಗಳ ಮೇಲೆ ದೇವರ ಅನುಗ್ರಹ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಕಟುವಾಗಿ ಮಾತನಾಡುವದಕ್ಕೇ ಹೆಸರಾಗಿರುವ ಸುಧಾಕರನ್ ಅವರು ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಈ ಹೇಳಿಕೆ ನೀಡಿದ್ದು, ಶಬರಿಮಲೆಯ ತಂತ್ರಿ(ಮುಖ್ಯಪುರೋಹಿತ)ಗಳಿಗೆ ಅಯ್ಯಪ್ಪ ದೇವರ ಮೇಲೆ ಭಕ್ತಿ ಇಲ್ಲ ಮತ್ತು ದೇವಾಲಯದ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದ್ದಾರೆ.
ತಂತ್ರಿಗಳಿಗಿಂದತ ಕತ್ತೆಗಳೇ ಎಷ್ಟೋ ವಾಸಿ. ದೇವಾಲಯದ ಬಳಿ ಇರುವ ಕತ್ತೆಗಳು ದೇವರಿಗೆ ಸೇವೆ ಸಲ್ಲಿಸುತ್ತವೆ. ಪಂಪಾ ಬಳಿಯಿಂದ ಗುಡ್ಡದ ಮೇಲಿನ ಅಯ್ಯಪ್ಪ ದೇಗುಲಕ್ಕೆ ಭಾರ ಕೊಂಡೊಯ್ಯುವ ಈ ಪ್ರಾಣಿಗಳು ಇದುವರೆಗೆ ಯಾವ ಪ್ರತಿಭಟನೆಯಲ್ಲೂ ಪಾಲ್ಗೊಂಡಿಲ್ಲ. ಕೆಲಸವಾದ ಬಳಿಕ ಪಂಪಾ ನದಿ ಬಳಿ ವಿಶ್ರಾಂತಿ ಪಡೆಯುತ್ತವೆ. ಇವರ ಎದುರು ತಂತ್ರಿಗಳ ಕೆಲಸ, ಸೇವೆ ಏನೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ಶಬರಿಮಲೆಗೆ ಎಲ್ಲ ಮಹಿಳೆಯರಿಗೂ ಅವಕಾಶ ನೀಡಿದ ಸುಪ್ರೀಂಕೋರ್ಟ್ ತೀರ್ಪನ್ನು ವಿರೋಧಿಸಿದ್ದ ತಂತ್ರಿ ಮನೆತನ ದೇವಾಲಯದ ಬಾಗಿಲು ಮುಚ್ಚುತ್ತೇವೆ ಎಂದು ಬೆದರಿಕೆ ಒಡ್ಡಿದ್ದರು.