ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸುತ್ತಿದ್ದ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಎಜೆಂಟ್ ನನ್ನು ಕಾಶ್ಮೀರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕಾಶ್ಮೀರದ ಕಿಶ್ತ್ ವಾರ್ ನಲ್ಲಿ ಖಚಿತ ಮಾಹಿತಿಯಾಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆಯ ಅಧಿಕಾರಿಗಳು ಐಎಸ್ಐ ಏಜೆಂಟ್ ಸೆಹ್ರಾನ್ ಶೇಖ್ ಅಲಿಯಾಸ್ ಅಬು ಜುಬೇರ್ ಎಂಬಾತನನ್ನು ಬಂಧಿಸಿದೆ. ಸೆಹ್ರಾನ್ ಶೇಖ್ ಮೂಲತಃ ಕಾಶ್ಮೀರದ ಮಲಿಕ್ಪೇಟ್ ಪ್ರಾಂತ್ಯದ ನಿವಾಸಿಯಾಗಿದ್ದು, ಹಲವು ವರ್ಷಗಳಿಂದ ಐಎಸ್ಐ ಪರ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಅಂತೆಯೇ ಕಣಿವೆರಾಜ್ಯದಲ್ಲಿ ಭಾರಿ ವಿಧ್ವಂಸಕ ಸಂಚು ರೂಪಿಸುತ್ತಿದ್ದಾಗ ಕಾಶ್ಮೀರ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಸೇನೆ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದೆ. ಮೂಲಗಳ ಪ್ರಕಾರ ಈತ ಕಾಶ್ಮೀರದಲ್ಲಿ ಭಾರಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದನಂತೆ. ಇದಕ್ಕೆ ಪಾಕಿಸ್ತಾನದ ಗುಪ್ತಚರ ಇಲಾಖೆಯ ಕುಮ್ಮಕ್ಕಿದ್ದು, ಅದರ ನೆರವಿನಿಂದಲೇ ಕಾಶ್ಮೀರದ ಪೊಲೀಸರ ಕುರಿತು ಮಾಹಿತಿ ಕಲೆಹಾಕುತ್ತಿದ್ದನಂತೆ. ಕಾಶ್ಮೀರ ಪೊಲೀಸರ ಕಾರ್ಯ ನಿರ್ವಹಣೆ, ಸಿಬ್ಬಂದಿ ನಿಯೋಜನೆ, ಆಯುಧ ಸಂಗ್ರಹಾಗಾರಗಳು, ಸೇನಾ ಆಯುಧ ಸಂಗ್ರಹಾಗಾರಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದನಂತೆ.
ಹೀಗೆ ಕಲೆಹಾಕಿದ ಮಾಹಿತಿಗಳನ್ನು ಪಾಕಿಸ್ತಾನ ಮೂಲದ ಹರ್ಕತ್ ಉಲ್ ಮುಜಾಹಿದ್ದೀನ್ ಎಂಬ ಉಗ್ರ ಸಂಘಟನೆಯ ಉಗ್ರರೊಂದಿಗೆ ಹಂಚಿಕೊಳ್ಳುವಾಗ ಕಾಶ್ನೀರ ಪೊಲೀಸರು ಮತ್ತು ಭಾರತೀಯ ಗುಪ್ತಚರ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ ಎನ್ನಲಾಗಿದೆ. ಪ್ರಸ್ತುತ ಈತನನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ಯಲಾಗಿದ್ದು, ನಿರಂತರ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos