ನವದೆಹಲಿ: ಆಧಾರ್ ಸಂಖ್ಯೆಯನ್ನು ಕೇವಲ ಪಾನ್ ಕಾರ್ಡ್ ಹಾಗೂ ಸರ್ಕಾರದ ಸವಲತ್ತು ಸಿಗುವ ಯೋಜನೆಗಳ ಪ್ರಯೋಜನ ಪಡೆಯಲು ಮಾತ್ರ ಸಂಯೋಜಿಸಬೇಕು ಎಂಬ ಸರ್ವೋಚ್ಛ ನ್ಯಾಯಾಲಯ ಆದೇಶದ ಬೆನ್ನಲ್ಲೇ ಚುನಾವಣಾ ಆಯೋಗವು, ಮತದಾರರ ಗುರುತಿನ ಚೀಟಿಯನ್ನು ಆಧಾರ್ ಜೊತೆ ಸಂಯೋಜಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದೆ ಇರಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಇದಕ್ಕಾಗಿ ಜನಪ್ರತಿನಿಧಿ ಕಾಯ್ದೆ-1951 ತಿದ್ದುಪಡಿ ಆಗಬೇಕಿದ್ದು, ಕಾನೂನು ಸಚಿವಾಲಯಕ್ಕೆ ಈ ಪ್ರಸ್ತಾಪವನ್ನು ರವಾನಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಈ ರೀತಿಯ ಚಿಂತನೆಗೂ ಮುನ್ನ ಚುನಾವಣಾ ಆಯೋಗ ಆಧಾರ್ ಪ್ರಾಧಿಕಾರದ ಸಲಹೆಯನ್ನು ಕೇಳಿದ್ದು, ಈ ವೇಳೆ ಆಧಾರ್ ಪ್ರಾಧಿಕಾರವು, ಸುಪ್ರೀಂಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಆಧಾರ್'ನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ಅದನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಸಂಯೋಜಿಸಲು ಸಾಧ್ಯವಾಗದೇ ಹೋಗಬಹುದು. ಕೇವಲ ಸೀಮಿತ ಉದ್ದೇಶಕ್ಕೆ ಅವಕಾಶ ನೀಡಬಹುದು ಎಂದು ತಿಳಿಸಿದೆ ಎಂದು ವರದಿಗಳು ತಿಳಿಸಿವೆ.
ಹೀಗಾಗಿ ಸಂಯೋಜನೆಗೆ ಯಾವುದೇ ಕಾನೂನಿನ ಅಡೆತಡೆ ಬಾರದಂತಾಗಲು ಕಾನೂನು ಸಚಿವಾಲಯಕ್ಕೆ ಪ್ರಸ್ತಾಪ ಕಳಿಸಲು ಆಯೋಗ ನಿರ್ಧರಿಸಿದೆ. ಸಚಿವಾಲಯ ಒಪ್ಪಿದರೆ ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆ ಮಂಡನೆ ಸಾಧ್ಯವಾಗಲಿದೆ.