ದೇಶ

ಶಬರಿಮಲೆ: ದೇಗುಲ ಪ್ರಧಾನ ಅರ್ಚಕರ ಅನುಮತಿ ಮೇರೆಗೆ ಅಯ್ಯಪ್ಪನಿಗೆ ತೃತೀಯ ಲಿಂಗಿಗಳ ಪೂಜೆ

Srinivasamurthy VN
ಕೊಚ್ಚಿ: ತೀವ್ರ ಚರ್ಚೆಗೆ ಕಾರಣವಾಗಿರುವ ಶಬರಿಮಲೆಗೆ ನಾಲ್ಕು ಮಂದಿ ತೃತೀಯ ಲಿಂಗಿಗಳು ಪೂಜೆ ಸಲ್ಲಿಕೆ ಮಾಡಿ ಸುದ್ದಿಗೆ ಗ್ರಾಸವಾಗಿದ್ದಾರೆ.
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ನಾಲ್ವರು ತೃತೀಯ ಲಿಂಗಿಗಳು ಪೊಲೀಸ್ ಭದ್ರತೆಯೊಂದಿಗೆ ಪ್ರವೇಶಿಸಿ ಮಂಗಳವಾರ ಪೂಜೆ ಸಲ್ಲಿಸಿದ್ದಾರೆ. ಸಂಪ್ರದಾಯದಂತೆ ಕಪ್ಪು ಸೀರೆ ಧರಿಸಿ, ಇರುಮುಡಿ ಹೊತ್ತಿದ್ದ ತೃತೀಯ ಲಿಂಗಿಗಳಾದ ಅನನ್ಯ, ತೃಪ್ತಿ, ರೆಂಜುಮೊಲ್ ಹಾಗೂ ಅವಂತಿಕ ಎಂಬುವರು ಅಯ್ಯಪ್ಪನ ದರ್ಶನ ಪಡೆದರು. ಇವರಿಗೆ ನಿಲಕ್ಕಲ್‌ನಿಂದ ಪಂಪಾನದಿಯವರೆಗೂ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.
ಇದೇ ನಾಲ್ಕು ಮಂದಿ ತೃತೀಯ ಲಿಂಗಿಗಳು ಸೋಮವಾರ ಶಬರಿಮಲೆ ಪ್ರವೇಶಕ್ಕೆ ಪ್ರಯತ್ನಿಸಿದ್ದರಾದರೂ ಪೊಲೀಸರು ಅವರನ್ನು ತಡೆದಿದ್ದರು. ಆದರೆ ಪಟ್ಟು ಬಿಡದ ತೃತೀಯ ಲಿಂಗಿಗಳು ಅಯ್ಯಪ್ಪನ ದರ್ಶನಕ್ಕೆ ಮುಂದಾಗಿದ್ದರು. ಬಳಿಕ ದೇಗುಲದ ಪ್ರಧಾನ ಅರ್ಚಕ ಅನುಮತಿ ಮೇರೆಗೆ ನಿನ್ನೆ ತೃತೀಯ ಲಿಂಗಿಗಳು ಅಯ್ಯಪ್ಪನ ದರ್ಶನ ಪಡೆದಿದ್ದಾರೆ.
ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸಲು ಅವಕಾಶ ದೊರೆತಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿರುವ ಅವರು, ಶಬರಿಮಲೆಗೆ ಅಯ್ಯಪ್ಪನ ದರ್ಶನ ಪಡೆಯುವುದು ನಮ್ಮ ಜೀವನದ ಗುರಿಯಾಗಿತ್ತು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
SCROLL FOR NEXT