ದೇಶ

ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಭ್ರಷ್ಟಾಚಾರ ನಡೆಸಿದ್ದಾರೆ: ಸುಬ್ರಮಣಿಯನ್ ಸ್ವಾಮಿ

Raghavendra Adiga
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆರೋಪಿದ್ದಾರೆ. ಶಕ್ತಿಕಾಂತ್ ಭ್ರಷ್ಟಾಚಾರದಲ್ಲಿ ಬಾಗಿಯಾಗಿದ್ದು ಇವರನ್ನು ಇಂತಹಾ "ಉನ್ನತ" ಸ್ಥಾನದಲ್ಲಿ ಹೇಗೆ ಕೂರಿಸಲಾಗಿದೆ ಎಂದು ಸ್ವಾಮಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ಸ್ವಾಮಿ ಶಕ್ತಿಕಾಂತ್ ಅವರ "ಭ್ರಷ್ಟಾಚಾರ" ಕುರಿತಂತೆ ಯಾವ ವಿವರ ನೀಡಿಲ್ಲ.
ನೂತನ ಗವರ್ನರ್ ಹೆಚ್ಚು ಭ್ರಷ್ಟರಾಗಿದ್ದಾರೆ, ನಾನು ಅವರನ್ನು ಈ ಹಿಂದೆ ಹಣಕಾಸು ಇಲಾಖೆಯಿಂದ ತೆಗೆದು ಹಾಕಿದ್ದೆ. ನಾನು ಶಕ್ತಿಕಾಂತ್ ದಾಸ್ ಅವರನ್ನು ಭ್ರಷ್ಟಾಚಾರಿ ಎಂದು ಕರೆದಿದ್ದೇನೆ. ಹಾಗೆಯೇ ಭರ್ಷ್ಟಾಚಾರದ ಕಾರಣ ಹಣಕಾಸು ಸಚಿವಾಲಯದಿಂದ ಕಿತ್ತುಹಾಕಲ್ಪಟ್ಟ ವ್ಯಕ್ತಿ ಇಂದು ಆರ್ ಬಿಐ ಗವರ್ನರ್ ಆಗಿರುವುದು ನನಗೆ ಅಚ್ಚರಿ ಉಂಟುಮಾಡಿದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ದೆಹಲಿಯ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ನ ವಿದ್ಯಾರ್ಥಿಗಳೊಡನೆ ಸಂವಾದ ಕಾರ್ಯಕ್ರಮದಲ್ಲಿ ಸ್ವಾಮಿ ಮಾತನಾಡುತ್ತಿದ್ದರು.
ಕಡೆಗೆ ಪತ್ರಕರ್ತರು ನಿಮ್ಮ ಪ್ರಕಾರ ಆರ್ ಬಿಐ ಗೆ ಯಾರು ಗವರ್ನರ್ ಆಗಬಹುದಿತ್ತು ಎಂದು ಪ್ರಶ್ನಿಸಲು ಅವರು ಬೆಂಗಳೂರಿನ ಇಂಡಿಯನ್ ಇನ್ ಸ್ಟಿಸ್ಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನ ಪ್ರಾದ್ಯಾಪಕರಾದ ಆರ್. ವೈದ್ಯನಾಥನ್ ಅವರ ಹೆಸರನ್ನು ಸೂಚಿಸಿದ್ದಾರೆ. "ಐಐಎಂಬಿ ಪ್ರಾದ್ಯಾಪಕರಾಗಿದ್ದ ವೈದ್ಯನಾಥನ್ ಸಂಘದ ಸಂಪರ್ಕದಲ್ಲಿದ್ದವರೂ ಆಗಿದ್ದರು. ಅವರು ನಮ್ಮ ಜನರಾಗಿದ್ದರು. ಹೀಗಾಗಿ ವೈದ್ಯನಾಥನ್ ಗವರ್ನರ್ ಆಗುವುದಕ್ಕೆ ಸೂಕ್ತ ವ್ಯಕ್ತಿ" ಎಂದು ಸ್ವಾಮಿ ಹೇಳಿದ್ದಾರೆ.
ಅಪನಗದೀಕರಣದ ಬಳಿಕ ಆರ್ಥಿಕ ಸಂತುಲತೆಯನ್ನು ಕಾಪಾಡಿಕೊಂಡು ಆರ್ಥಿಕತೆಯನ್ನು ಸಮರ್ಥವಾಗಿ ಮುನ್ನಡೆಸಿದ್ದ ದಾಸ್ ಡಿಸೆಂಬರ್ 11ರಂದು ಆರ್ ಬಿಐಅ ನ ನೂತನ ಗವರ್ನರ್ ಆಗಿ ಅಧಿಕಾರಕ್ಕೇರಿದ್ದಾರೆ. ಇದಕ್ಕೆ ಹಿಂದೆ ಗವರ್ನರ್ ಆಗಿದ್ದ ಊರ್ಜಿತ್ ಪಟೇಲ್ ಧಿಡೀರ್ ರಾಜೀನಾಮೆಯ ಒಂದು ದಿನದ ಬಳಿಕ ಶಕ್ತಿಕಾಂತ್ ದಾಸ್ ನೂತನ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದರು.
2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇಸರಿ ಪಕ್ಷಕ್ಕೆ ಯಾವುದೇ ಪ್ರಬಲ ಸ್ಪರ್ಧಿಗಳಿಲ್ಲ, ನರೇಂದ್ರ ಮೋದಿಯವರ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಸ್ವಾಮಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರವಿತ್ತರು
SCROLL FOR NEXT