ಪುಣೆ: 5 ರಾಜ್ಯಗಳ ಚುನಾವಣೆಯ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಯಶಸ್ಸಿನ ಹೊಣೆ ಹೊರಲು ಹಲವರು ಸಿದ್ಧರಿರುತ್ತಾರೆ. ಆದರೆ ಸೋಲು ಅನಾಥ ಎಂದು ಹೇಳಿದ್ದಾರೆ.
ಯಶಸ್ಸಿನ ಕೀರ್ತಿ ಹೊತ್ತುಕೊಳ್ಳುವುದಕ್ಕೆ ಸಿದ್ಧವಿರುವ ರೀತಿಯಲ್ಲಿ ಸೋಲಿನ ಹೊಣೆ ಹೊತ್ತುಕೊಳ್ಳುವುದಕ್ಕೆ ಯಾರೂ ಮುಂದಾಗುವುದಿಲ್ಲ ಎಂದು ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗಡ್ಕರಿ ಹೇಳಿದ್ದಾರೆ. ಕೆಲವೊಮ್ಮೆ ಬ್ಯಾಂಕ್ ಗಳು ಯಶಸ್ಸು ಗಳಿಸುತ್ತವೆ ಹಾಗೂ ಕೆಲವೊಮ್ಮೆ ಸೋಲನ್ನೂ ಕಂಡಿರುತ್ತವೆ. ಬ್ಯಾಂಕ್ ಗಳು ಎರಡೂ ರೀತಿಯ ಪರಿಸ್ಥಿತಿಗಳನ್ನು ಎದುರಿಸಬೇಕು, ರಾಜಕೀಯದಲ್ಲೂ ಅಷ್ಟೇ ಸೋಲು ಎದುರಾದಾಗ ಸಮಿತಿ ರಚನೆ ಮಾಡುತ್ತಾರೆ. ಅದೇ ಗೆದ್ದಾಗ ಯಾರನ್ನೂ ಕೇಳುವುದಿಲ್ಲ ಎಂದು ಗಡ್ಕರಿ ಹೇಳಿದ್ದಾರೆ.
ಸೋಲಿನ ಹೊಣೆ ಹೊರುವುದೂ ಸಹ ನಾಯಕತ್ವದ ಭಾಗವಾಗಿರಬೇಕು, ಸೋಲಿಗೆ ಹೊಣೆ ಹೊರುವವರೆಗೂ ಸಂಘಟನೆಯೆಡೆಗೆ ನಾಯಕತ್ವದ ನಿಷ್ಠೆ ಸಾಬೀತಾಗುವುದಿಲ್ಲ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.