ನವದೆಹಲಿ: ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಮೇಲೆ ಒತ್ತಡ ಹಾಕಿ ಒಂದು ನಿರ್ದಿಷ್ಟ ಕುಟುಂಬ ಹೆಸರು ಹೇಳಿಸಲು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಶನಿವಾರ ಕಾಂಗ್ರೆಸ್ ಆರೋಪಿಸಿದೆ.
ಆಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಕ್ಯಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರು ಪ್ರಸ್ತಾಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಆರ್ ಪಿಎನ್ ಸಿಂಗ್ ಅವರು, ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಚುನಾವಣೆಯಲ್ಲಿ ಬೇರೆ ವಿಷಯ ಇಲ್ಲ. ಹೀಗಾಗಿ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಒಂದು ನಿರ್ದಿಷ್ಟ ಕುಟುಂಬದ ಹೆಸರು ಹೇಳುವಂತೆ ಮೈಕೆಲ್ ಮೇಲೆ ಒತ್ತಡ ಹಾಕುತ್ತಿರುವುದನ್ನು ಕೆಲವು ಸುದ್ದಿ ವಾಹಿನಿಗಳು ತೋರಿಸಿವೆ. ಅದನ್ನು ನಾವು ಗಮನಿಸಿದ್ದೇವೆ ಎಂದರು.
ಮುಂದೆ ಪ್ರಧಾನಿಯಾಗುತ್ತಿರುವ ಇಟಲಿ ಮಹಿಳೆಯ ಪುತ್ರನ ಬಗ್ಗೆ ಮೈಕೆಲ್ ಮಾತನಾಡಿದ್ದಾರೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಸಿಂಗ್, ಇದರ ಹಿಂದೆ ಬಿಜೆಪಿ ಬರಹಗಾರರು ಕೆಲಸ ಮಾಡುತ್ತಿದ್ದಾರೆ ಎಂದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಸಿಂಗ್, ರಾಫೆಲ್ ಯುದ್ಧ ವಿಮಾನ ಖರೀದಿ ಹಗರಣದ ಸಂಪೂರ್ಣ ಸಾಕ್ಷ್ಯಗಳಿದ್ದು, ಮೊದಲ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದರು.