ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
ಅಗರ್ತಲಾ: ಪಾಕಿಸ್ತಾನದಿಂದ ಒಂದು ಬುಲೆಟ್ ದೇಶದ ಗಡಿ ಪ್ರವೇಶಿಸಿದರೂ, ಅಸಂಖ್ಯಾತ ಬುಲೆಟ್ ನಿಂದ ಪ್ರತ್ಯುತ್ತ ನೀಡುವಂತೆ ಸೇನೆಗೆ ಸೂಚಿಸಿದ್ದೇನೆಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ಹೇಳಿದ್ದಾರೆ.
ತ್ರಿಪುರದ ರಾಜಧಾನಿ ಅಗರ್ತಲಾದ ಹೊರವಲಯದಲ್ಲಿರುವ ಬಾರ್ಜಾಲಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಪಾಕಿಸ್ತಾನದೊಂದಿಗೆ ಭಾರತ ಶಾಂತಿಯನ್ನು ಬಯಸುತ್ತಿದೆ. ಆದರೆ, ಪಾಕಿಸ್ತಾನದ ಒಂದೇ ಒಂದು ಬುಲೆಟ್ ಭಾರತದ ಗಡಿ ದಾಟಿದರೂ, ಅಸಂಖ್ಯಾತ ಬುಲೆಟ್ ಗಳ ಮೂಲಕ ಪ್ರತ್ಯುತ್ತರ ನೀಡುವಂತೆ ಸೇನಾಪಡೆಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ನಮ್ಮ ನೆರೆಯ ರಾಷ್ಟ್ರವಾಗಿರುವ ಪಾಕಿಸ್ತಾನದ ಮೇಲೆ ಮೊದಲು ಆಕ್ರಮಣ ಮಾಡಲು ನಾವು ಬಯಸುವುದಿಲ್ಲ. ನೆರೆಹೊರೆಯ ರಾಷ್ಟ್ರಗಳೊಂದಿಗೆ ಭಾರತ ಶಾಂತಿ ಹಾಗೂ ಸಾಮರಸ್ಯದಿಂದ ಇರಲು ಇಚ್ಚಿಸುತ್ತದೆ. ಆದರೆ, ಪಾಕಿಸ್ತಾನ ಸೇನೆ ಕಾಶ್ಮೀರವನ್ನು ಪಡೆಯುವ ಸಲುವಾಗಿ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ದುರಾದೃಷ್ಟಕರ ಸಂಗತಿ ಎಂದು ತಿಳಿಸಿದ್ದಾರೆ.
ಬಳಿಕ ಎಡರಂಗದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಕಳೆದ 25 ವರ್ಷಗಳಿಂದಲೂ ತ್ರಿಪುರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಯಾವುದೇ ಅಭಿವೃದ್ಧಿ ಪರ ಕೆಲಸಗಳನ್ನು ಮಾಡಿಲ್ಲ. ರಾಜ್ಯದಲ್ಲಿರುವ ಬಡತನ ಮತ್ತು ನಿರುದ್ಯೋಗದಂತಹ ಸಮಸ್ಯೆಗಳಿಗೆ ಇಲ್ಲಿನ ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಶ್ನಿಸಿದ್ದಾರೆ. ಭಾರತದ 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತವನ್ನು ನಡೆಸುತ್ತಿದೆ. ಹಲವು ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರವೇಕೆ ನಡೆಸುತ್ತಿದೆ? ಏಕೆಂದರೆ, ಆ ರಾಜ್ಯಗಳ ಜನರು ಬಿಜೆಪಿಯನ್ನು ನಂಬುತ್ತಿದ್ದಾರೆ. ಬಡತನ ಹಾಗೂ ನಿರುದ್ಯೋಗದಂತಹ ಸಮಸ್ಯೆಗಳನ್ನು ಬಿಜೆಪಿ ಮಾತ್ರ ಪರಿಹರಿಸಲು ಸಾಧ್ಯ ಎಂದು ಪ್ರಾಮಾಣಿಕವಾಗಿ ನಂಬುತ್ತಿದ್ದಾರೆ.
ತ್ರಿಪುರ ಅತೀ ಹೆಚ್ಚು ನೈಸರ್ಗಿಕ ಸಂಪನ್ಮೂಲವನ್ನು ಹೊಂದಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಆದರೆ, ಭಾರತದ ಈಶಾನ್ಯ ರಾಜ್ಯಗಳಲ್ಲಿ ತ್ರಿಪುರ ಮೊದಲ ರಾಜ್ಯವಾಗಲಿದೆ. ಎಡರಂಗ ಪಕ್ಷಕ್ಕೆ ಅಧಿಕಾರ ನಡೆಸಲು ಬಾರಿ ಅವಕಾಶಗಳನ್ನು ನೀಡಿದ್ದೀರಿ. ಈ ಬಾರಿ ಬಿಜೆಪಿಗೆ ಅವಕಾಶವನ್ನು ನೀಡಿ, ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos