ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಎಲ್ ಒಸಿ) ಬಳಿ ಪಾಕಿಸ್ತಾನ ಸೇನೆ ನಿರಂತರ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ತೊಡಗಿರುವುದರಿಂದ ಗಡಿ ಪ್ರದೇಶದಲ್ಲಿ ವಾಸವಾಗಿರುವ ಭಾರತೀಯರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಮಂಗಳವಾರ 14,460 ಬಂಕರ್ಗಳ ನಿರ್ಮಾಣಕ್ಕೆ ಅನುಮತಿ ನೀಡಿದೆ.
ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯ ನಿವಾಸಿಗಳ ಪ್ರಾಣ ರಕ್ಷಣೆಗಾಗಿ 14,460 ಬಂಕರ್ ಗಳನ್ನು ನಿರ್ಮಿಸುವ ಪ್ರಸ್ತಾವನೆಗೆ ಇತ್ತೀಚಿಗೆ ಗೃಹ ಸಚಿವಾಲಯ ಒಪ್ಪಿಗೆ ನೀಡಿದೆ ಎಂದು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್ ಆಹಿರ್ ಅವರು ಇಂದು ಲೋಕಸಭೆಗೆ ತಿಳಿಸಿದರು.
ಕಾಶ್ಮೀರದ ಸಾಂಬಾ, ಜಮ್ಮು, ಕಥುವಾ, ಪೂಂಚ್ ಮತ್ತು ರಾಜೋರಿ ಜಿಲ್ಲೆಯಗಳ ಗಡಿ ಭಾಗಗಳಲ್ಲಿ ನಿರ್ಮಿಸಲ್ಪಡುವ ಈ ಬಂಕರ್ಗಳ ಪೈಕಿ 1,431 ಬಂಕರ್ಗಳು ಸಮುದಾಯ ಬಂಕರ್ಗಳಾಗಿದ್ದು, ಉಳಿದ 13,029 ಬಂಕರ್ ಗಳು ವೈಯಕ್ತಿಕ ಬಂಕರ್ಗಳಾಗಿವೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಪಾಕಿಸ್ತಾನ ಸೇನೆ ಪದೇಪದೆ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, ಕಳೆದ ತಿಂಗಳು ನಾಲ್ವರು ಬಿಎಸ್ ಎಫ್ ಯೋಧರು ಹುತಾತ್ಮರಾಗಿದ್ದರು.