ಕಾನ್ಪುರ: ಉತ್ತರ ಪ್ರದೇಶದಲ್ಲಿ ಮತ್ತೊಂದು ವೈದ್ಯಕೀಯ ದುರಂತ ಸಂಭವಿಸಿದ್ದು, ನಕಲಿ ವೈದ್ಯನೋರ್ವ ಗ್ರಾಮಸ್ಥರಿಗೆ ಒಂದೇ ಸಿರಿಂಜ್ ನಲ್ಲಿ ಚಿಕಿತ್ಸೆ ನೀಡಿದ್ದರ ಪರಿಣಾಮ 40 ಮಂದಿ ಗ್ರಾಮಸ್ಥರು ಮಾರಣಾಂತಿಕ ಹೆಚ್ ಐವಿ ಸೋಂಕು ಪೀಡಿತರಾಗಿದ್ದಾರೆ.
ಉತ್ತರ ಪ್ರದೇಶದ ಉನ್ನಾವ್ ನಲ್ಲಿ ಈ ಘಟನೆ ನಡೆದಿದ್ದು, ಗ್ರಾಮದಲ್ಲಿನ ನಕಲಿ ವೈದ್ಯನೋರ್ವ ತನ್ನ ಬಳಿ ಚಿಕಿತ್ಸೆಗೆ ಬಂದ ಗ್ರಾಮಸ್ಥರಿಗೆ ಒಂದೇ ಸಿರಿಂಜ್ ಬಳಕೆ ಮಾಡಿ ಚಿಕಿತ್ಸೆ ನೀಡಿದ್ದಾನೆ ಎನ್ನಲಾಗಿದೆ. ಪರಿಣಾಮ ಗ್ರಾಮದ 40 ಮಂದಿಯಲ್ಲಿ ಹೆಚ್ ಐವಿ ಸೋಂಕು ಪತ್ತೆಯಾಗಿದೆ. ಇನ್ನು ನಕಲಿ ವೈದ್ಯನ ವಿರುದ್ಧ ಆರೋಗ್ಯ ಇಲಾಖೆ ದೂರು ದಾಖಲು ಮಾಡಿದ್ದು, ಬಂಗಾರ್ ಮಾವ್ ಠಾಣೆಯಲ್ಲಿ ವೈದ್ಯನ ವಿರುದ್ಧ ದೂರು ದಾಖಲಾಗಿದೆ.
ಮಾಧ್ಯಮ ವರದಿಗಳ ಅನ್ವಯ, ಇತ್ತೀಚೆಗೆ ಸರ್ಕಾರೇತರ ಎನ್ ಜಿಒ ಸಂಸ್ಥೆಯೊಂದು ಗ್ರಾಮದಲ್ಲಿ ವೈದ್ಯಕೀಯ ಕ್ಯಾಂಪ್ ಆರಂಭಿಸಿದ್ದಾಗ ಈ ಆಘಾತಕಾರಿ ಸತ್ಯ ಹೊರಗೆ ಬಂದಿದೆ. 2017ರ ನವೆಂಬರ್ ನಲ್ಲಿ ಕ್ಯಾಂಪ್ ಆರಂಭವಾಗಿದ್ದು, ವೈದ್ಯಕೀಯ ಕ್ಯಾಂಪ್ ವೇಳೆ ಗ್ರಾಮಸ್ಥರ ರಕ್ತ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಗ್ರಾಮದ 40 ಮಂದಿಯಲ್ಲಿ ಎಚ್ ಐವಿ ಸೋಂಕು ಪತ್ತೆಯಾಗಿದೆ. ಈ ಬಗ್ಗೆ ಆಂತರಿಕ ತನಿಖೆ ನಡೆಸಿದಾಗ ವೈದ್ಯನ ಯಡವಟ್ಟು ಬಯಲಾಗಿದೆ. ಆತವ ವಿವರ ಪರಿಶೀಲಿಸಿದಾಗ ಆತ ಕೂಡ ನಕಲಿ ವೈದ್ಯ ಎಂದು ಸಾಬೀತಾಗಿದೆ. ಕೂಡಲೇ ವೈದ್ಯಕೀಯ ಕ್ಯಾಂಪ್ ನ ಮುಖ್ಯಸ್ಥರು ಸ್ಥಳೀಯ ಆರೋಗ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ನಕಲಿ ವೈದ್ಯನ ವಿರುದ್ಧ ದೂರು ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬಂಗಾರ್ ಮಾವ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯಕೀಯ ಕ್ಯಾಂಪ್ ನ ಮುಖ್ಯಸ್ಥರು ಪ್ರಸ್ತುತ ಗ್ರಾಮದಲ್ಲಿರುವ ಶೇ.25ರಷ್ಚು ಮಂದಿಯ ರಕ್ತದ ಮಾದರಿಯನ್ನು ಮಾತ್ರ ಪರೀಕ್ಷೆಗೆ ಕಳುಹಿಸಲಾಗಿದ್ದು, ಇನ್ನು ಶೇ.25ರಷ್ಟು ಮಂದಿಯ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನುಳಿದ ಶೇ.25ರಷ್ಟು ಮಂದಿಯ ರಕ್ತದ ಮಾದರಿ ಸಂಗ್ರಹಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಆ ವೈದ್ಯನ ಬಳಿ ಗ್ರಾಮದ ಶೇ.75ಕ್ಕೂ ಅಧಿಕ ಮಂದಿ ವಿವಿಧ ಕಾರಣಗಳಿಗಾಗಿ ಚಿಕಿತ್ಸೆ ಪಡೆದಿದ್ದು, ಎಲ್ಲರಿಗೂ ಒಂದೇ ಸಿರಿಂಜ್ ನಲ್ಲಿ ಚಿಕಿತ್ಸೆ ನೀಡಿದ್ದಾನೆ. ಹೀಗಾಗಿ ಸೋಂಕು ಪೀಡಿತರ ಸಂಖ್ಯೆ ಇನ್ನೂ ಹೆಚ್ಚಳವಾಗಿರುವ ಆತಂಕ ಇದೆ ಎಂದು ಹೇಳಿದ್ದಾರೆ.
ಗ್ರಾಮದ ಕೌನ್ಸಿಲರ್ ಸುನಿಲ್ ಅವರು ಮಾತನಾಡಿ ಪ್ರಸ್ತುತ ಗ್ರಾಮದಲ್ಲಿ ಮೂರು ಭಾಗಗಲ್ಲಿ ವೈದ್ಯಕೀಯ ಕ್ಯಾಂಪ್ ತೆರೆಯಲಾಗಿದ್ದು, ವೈದ್ಯರು ಪರೀಕ್ಷೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos