ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಬಳಿಕ ಬ್ಯಾಂಕ್ ಗಳ ವವ್ಯಹಾರದ ಕುರಿತು ಕಠಿಣ ನಿರ್ಧಾರ ತಳೆಯಲು ಮುಂದಾಗಿರುವ ಕೇಂದ್ರ ಸರ್ಕಾರ ಪ್ರಸ್ತುತ ಇರುವ ಬ್ಯಾಂಕುಗಳ ಮಂಡಳಿಯನ್ನೇ ವಿಸರ್ಜನೆ ಮಾಡುವ ಕುರಿತು ಚಿಂತನೆಯಲ್ಲಿ ತೊಡಗಿದೆ.
ಬ್ಯಾಂಕುಗಳಿಗೆ ಸಂಬಂಧಸಿದ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಅಧಿಕಾರ ಹೊಂದಿರುವ ಬ್ಯಾಂಕುಗಳ ಮಂಡಳಿ ವಿಸರ್ಜನೆ ಮಾಡುವ ಕುರಿತು ಕೇಂದ್ರ ಸರ್ಕಾರ ಚಿಂತನೆಯಲ್ಲಿ ತೊಡಗಿದ್ದು, ಪ್ರಸ್ತುತ ಈ ಮಂಡಳಿಗೆ ವಿನೋದ್ ರಾಯ್ ಅವರು ಮುಖ್ಯಸ್ಥರಾಗಿದ್ದಾರೆ. ಇದೇ ಮಾರ್ಚ್ ನಲ್ಲಿ ವಿನೋದ್ ರಾಯ್ ಅವರು ನಿವೃತ್ತರಾಗಲಿದ್ದು, ಇವರ ನಿವೃತ್ತಿ ಬಳಿಕ ಮಂಡಳಿಯನ್ನು ವಿಸರ್ಜನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದೇ ಕಾರಣಕ್ಕೆ ಈ ವರೆಗೂ ಮಂಡಳಿದೆ ಮುಂದಿನ ಮುಖ್ಯಸ್ಥರನ್ನು ನೇಮಕ ಮಾಡಿಲ್ಲ ಎನ್ನಲಾಗಿದೆ.
ಕೇವಲ ಬ್ಯಾಂಕುಗಳ ಮಂಡಳಿಯನ್ನು ಮಾತ್ರವಲ್ಲದೇ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ. 2016ರಲ್ಲಿ ಕೇಂದ್ರ ವಿತ್ತ ಸಚಿವಾಲಯದ ಅಡಿಯಲ್ಲಿ ಬ್ಯಾಂಕುಗಳ ಮಂಡಳಿಯನ್ನು ರಚನೆ ಮಾಡಲಾಗಿತ್ತು. ಮಂಡಳಿಯ ಮುಖ್ಯಸ್ಥರನ್ನಾಗಿ ಮಾಜಿ ಸಿಎಜಿ ಮುಖ್ಯಸ್ಥ ವಿನೋದ್ ರಾಯ್ ಅವರನ್ನು ನೇಮಕ ಮಾಡಲಾಗಿತ್ತು. 2ಜಿ ಹಗರಣದ ಬಯಲಿಗೆಳೆದವರಲ್ಲಿ ವಿನೋದ್ ರಾಯ್ ಪ್ರಮುಖರಾಗಿದ್ದಾರೆ.
ಇನ್ನು ವಿನೋದ್ ರಾಯ್ ಭಾರತ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಾಗಿಯೂ ಆಯ್ಕೆಯಾಗಿರುವುದರಿಂದ ಅವರು ಆ ಬಗ್ಗೆಯೇ ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ ಎಂಬ ಆರೋಪಗಳೂ ಕೂಡ ಕೇಳಿ ಬಂದಿದೆ. ಅಲ್ಲದೆ ತಾಂತ್ರಿಕ ಉನ್ನತೀಕರಣ ಮತ್ತು ಬ್ಯಾಂಕ್ ಸಿಬ್ಬಂದಿಗಳ ತರಬೇತಿಯಲ್ಲೂ ಬ್ಯಾಂಕುಗಳ ಮಂಡಳಿ ಆಸ್ತಕ್ತಿ ತೋರುತ್ತಿರಲಿಲ್ಲ. ಕನಿಷ್ಟ ಪಕ್ಷ ಮ್ಯಾನೇಜರ್ ಗಳ ಮಟ್ಟದ ಅಧಿಕಾರಿಗಳ ತಾಂತ್ರಿಕ ಉನ್ನತೀಕರಣದಲ್ಲೂ ಬ್ಯಾಂಕುಗಳ ಮಂಡಳಿ ನಿರೀಕ್ಷೆ ಹುಸಿಗೊಳಿಸಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಬ್ಯಾಂಕುಗಳ ಮಂಡಳಿ ವಿಸರ್ಜನೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ.
ಬ್ಯಾಂಕುಗಳ ಮಂಡಳಿಯ ಮೇಲುಸ್ತುವಾರಿಯಲ್ಲಿ ಬ್ಯಾಂಕುಗಳ ಅಧ್ಯಕ್ಷರ ನೇಮಕವಾಗುತ್ತಿದ್ದು, ಈ ಹಿಂದೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಪ್ರಮುಖ ಅಧಿಕಾರಿಗಳನ್ನು ಮಂಡಳಿ ಅಡಿಯಲ್ಲಿ ನೇಮಕ ಮಾಡಲಾಗಿತ್ತು. ಅಂದು ಪಿಎನ್ ಬಿ ಮುಖ್ಯಸ್ಥರಾಗಿದ್ದ ಉಶಾ ಅನಂತ ಸುಬ್ರಮಣಿಯನ್ ಅವರನ್ನು ಅಲಹಾಬಾದ್ ಬ್ಯಾಂಕ್ ಮುಖ್ಯಸ್ಥರಾಗಿ, ಬ್ಯಾಂಕ್ ಆಫ್ ಇಂಡಿಯಾ ಮುಖ್ಯಸ್ಥರಾಗಿದ್ದ ಮೆಲ್ವಿನ್ ಅವರನ್ನು ಸಿಂಡಿಕೇಟ್ ಬ್ಯಾಂಕ್ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos