ದೇಶ

ದೆಹಲಿ ಮುಖ್ಯ ಕಾರ್ಯದರ್ಶಿ ಪ್ರಕಾಶ್ ತುಟಿಗೆ ಪೆಟ್ಟು: ವೈದ್ಯಕೀಯ ವರದಿ

Lingaraj Badiger
ನವದೆಹಲಿ: ದೆಹಲಿ ಆಡಳಿರೂಢ ಆಮ್ ಆದ್ಮಿ ಪಕ್ಷದ ಶಾಸಕರಿಂದ ಹಲ್ಲೆಗೊಳಗಾಗಿರುವ ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಕೆಳ ತುಟಿಗೆ ಪೆಟ್ಟು ಬಿದ್ದಿದೆ ಮತ್ತು ಕಿವಿ ಹಿಂದೆ ಊತ ಇದೆ ಎಂದು ವೈದ್ಯಕೀಯ ವರದಿ ತಿಳಿಸಿರುವುದಾಗಿ ಬುಧವಾರ ದೆಹಲಿ ಪೊಲೀಸರು ಹೇಳಿದ್ದಾರೆ.
ಕಳೆದ ಸೋಮವಾರ ರಾತ್ರಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಕೆಲ ಆಪ್ ಶಾಸಕರು ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಅಂಶು ಪ್ರಕಾಶ್ ಆರೋಪಿಸಿದ್ದು, ಈ ಸಂಬಂಧ ದೆಹಲಿ ಪೊಲೀಸ್ ಇಬ್ಬರು ಶಾಸಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು ಅಂಶು ಪ್ರಕಾಶ್ ಅವರನ್ನು ನಿನ್ನೆ ಅರುಣಾ ಅಸಫ್ ಅಲಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಇಂದು ವೈದ್ಯಕೀಯ ವರದಿ ಪೊಲೀಸರ ಕೈ ಸೇರಿದ್ದು, ಎರಡೂ ಕಿವಿಯ ಹಿಂದೆ ಊತ ಇದೆ ಮತ್ತು ಕೆಳ ತುಟಿಗೆ ಪೆಟ್ಟು ಬಿದ್ದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮುಖ್ಯ ಕಾರ್ಯದರ್ಶಿಯ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದೆಹಲಿ ಪೊಲೀಸರು ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಹಾಗೂ ಪ್ರಕಾಶ್ ಜರ್ವಾಲ್ ಅವರನ್ನು ಬಂಧಿಸಿದ್ದು, ಆರೋಪಿ ಶಾಸಕರನ್ನು ಕೋರ್ಟ್ ಗುರುವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
SCROLL FOR NEXT