ಸೊಹ್ರಾಬುದ್ದೀನ್ ಪ್ರಕರಣ: ಬಾಂಬೆ ಹೈಕೋರ್ಟ್ ನೂತನ ಏಕಸದಸ್ಯ ಪೀಠಕ್ಕೆ ವರ್ಗಾವಣೆ
ಮುಂಬೈ: ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಕೆಲವು ಹಿರಿಯ ಇಪಿಎಸ್ ಅಧಿಕಾರಿಗಳನ್ನು ವಿಚಾರಣೆಯಿಂದ ಕೈಬಿಟ್ಟದ್ದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ನೂತನ ಏಕಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿದೆ.
ನ್ಯಾಯಾಧೀಶರು ಈ ಸಂಬಂಧ ವಿಚಾರಣೆ ಪ್ರಾರಂಭಿಸಿದ ಮೂರು ದಿನಗಳ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದುವರೆಗೆ ಅರ್ಜಿ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಅವರು ಇನ್ನು ಈ ಅರ್ಜಿಯ ವಿಚಾರಣೆಯಲ್ಲಿ ಬಾಗವಹಿಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ವೆಬ್ ಸೈಟಿನಲ್ಲಿ ಇಂದು ಸಂಜೆ ಪ್ರಕಟವಾದ ನೋಟೀಸಿನಲ್ಲಿ ತಿಳಿಸಲಾಗಿದೆ.
ಮೋಹಿತೆ ಹೊರತಾಗಿ ಇನ್ನೊಬ್ಬ ನ್ಯಾಯಾಧೀಶರು ಸಹ ಬದಲಾಗಿದ್ದಾರೆ.ಮೋಹಿತೆ ಅವರು ಇನ್ನು ಮುಂದಿನ ದಿನದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಳ್ಳಲಿದ್ದಾರೆ. ಇನ್ನೋರ್ವ ನ್ಯಾಯಮೂರ್ತಿಗಳಾದ ಎನ್.ಡಬ್ಲ್ಯು. ಸಾಂಬ್ರೆ ಕ್ರಿಮಿನಲ್ ಪರಿಷ್ಕರಣೆ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ ಎಂದು ನೋಟೀಸಿನಲ್ಲಿ ಹೇಳಲಾಗಿದೆ.
ಸೊಹ್ರಾಬುದ್ದೀನ್ ಸಹೋದರ ರುಬಾಬುದ್ದೀನ್ ಸಲ್ಲಿಸಿದ್ದ ರ್ಜಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಐಪಿಎಸ್ ಅಧಿಕಾರಿಗಳಾದ ಡಿ.ಜಿ. ವನ್ಜಾರಾ, ದಿನೇಶ್ ಎಮ್ಎನ್ ಮತ್ತು ರಾಜ್ ಕುಮಾರ್ ಪಾಂಡಿಯನ್ ಅವರುಗಳನ್ನು ವಿಚಾರಣೆಯಿಂದ ಕೈಬಿಟ್ಟಿರುವುದನ್ನು ಪ್ರಶ್ನಿಸಲಾಗಿತ್ತು. ಇದಲ್ಲದೆ ಗುಜರಾತಿನ ಮಾಜಿ ಐಪಿಎಸ್ ಅಧಿಕಾರಿ ಎನ್.ಕೆ. ಅಮೀನ್ ಮತ್ತು ರಾಜಸ್ಥಾನ ಪೊಲೀಸ್ ಕಾನ್ ಸ್ಟೇಬಲ್ ದಲ್ಪಾತ್ ಸಿಂಗ್ ರಾಥೋಡ್ ಅವರ ವಿರುದ್ಧ ಸಿಬಿಐ ಸಲ್ಲಿಸಿದ್ದ ಎರಡು ಪರಿಷ್ಕರಣಾ ಅರ್ಜಿಗಳು ನ್ಯಾಯಮೂರ್ತಿ ಮೋಹಿತೆ ಎದುರಿಗೆ ಬಂದಿದ್ದವು. ಅಲ್ಲದೆ ಒಟ್ಟು ಐದು ಅರ್ಜಿಗಳಲ್ಲಿ ನಾಲ್ಕು ಅರ್ಜಿಗಳ ಸ್ಂಬಂಧ ಎಲ್ಲಾ ಪಕ್ಷಗಳ ವಾದದ ಪ್ರಮುಖ ಭಾಗಗಳನ್ನು ಇವರು ಆಗಲೇ ಆಲಿಸಿದ್ದರು.
ವನ್ಜಾರಾ, ಅಮೀನ್, ದಿನೇಶ್ ಹಾಗೂ ಪಾಂಡಿಯನ್ ಅವರುಗಳ ಪರ ವಕೀಲರಾದ ಮಹೇಶ್ ಜೇಠ್ಮಲಾನಿ ಸೋಮವಾರದಂದು ಪಾಂಡಿಯನ್ ಅವರ ಕುರಿತಾಗಿ ತಮ್ಮ ವಾದ ಮಂಡನೆಯನ್ನು ಪೂರ್ಣಗೊಳಿಸಬೇಕಿದೆ. ಆಬಳಿಕ ವನ್ಜಾರಾ ಅವರ ವಿರುದ್ಧದ ಅರ್ಜಿ ವಿಚಾರಣೆಯನ್ನು ಏಕ ಸದಸ್ಯ ಪೀಠವು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos