ದೇಶ

ಮುಖ್ಯ ಕಾರ್ಯದರ್ಶಿ ಹಲ್ಲೆ ಪ್ರಕರಣ: ಸಂಪುಟ ಸಭೆಗೆ ಹಾಜರಾದ ಅಂಶು ಪ್ರಕಾಶ್

Raghavendra Adiga
ನವದೆಹಲಿ: ಎಎಪಿ ಶಾಸಕರಿಂದ ಹಲ್ಲೆಗೊಳಗಾಗಿದ್ದ ದೆಹಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಇಂದು ರಾಜ್ಯ ಸಚಿವ ಸಂಪುಟ ಸಭೆಗೆ ಹಾಜರಾಗಿದ್ದರು. ದಾಳಿ ನಡೆದ ತರುವಾಯ ಇದೇ ಮೊದಲ ಬಾರಿಗೆ ಅವರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. 
ಯಾವುದೇ ಅಧಿಕಾರಿಗಳ ಮೇಲೆ ಎಎಪಿ ಶಾಸಕರಿಂದ ದೈಹಿಕ ಅಥವಾ ಮೌಖಿಕ ಹಲ್ಲೆ ನಡೆಯುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸ್ಪಷ್ಟನೆ ಕೇಳಿದ ಬಳಿಕ ಪ್ರಕಾಶ್ ಸಭೆಗೆ ಹಾಜರಾಗಿದ್ದರು.
ಮುಖ್ಯ ಕಾರ್ಯದರ್ಶಿಗಳ ಮೇಲೆ ಹಲ್ಲೆ ಪ್ರಕರಣದಲ್ಲಿ ಪೋಲೀಸರಿಗೆ ಮಾಹಿತಿ ನೀಡಿದ್ದ ಮುಖ್ಯಮಂತ್ರಿ ಕೇಜ್ರಿವಾಲ್ ಸಲಹೆಗಾರ ವಿಕೆ ಜೈನ್ ಒಂದು ವಾರದ ಕಾಲ ದೀರ್ಘಾವಧಿ ವೈದ್ಯಕೀಯ ರಜೆ ತೆಗೆದುಕೊಂಡಿದ್ದಾರೆ. ಫೆ.19 ರ ನಂತರದ ಯಾವ ಸಭೆಗೆ ಸಹ ಜೈನ್ ಹಾಜರಾಗಿಲ್ಲ ಎಂದು ಮೂಲಗಳು ಹೇಳಿದೆ.
ಮುಖ್ಯಮಂತ್ರಿಗಳ ನಿವಾಸದಲ್ಲಿ ಮುಖ್ಯ ಕಾರ್ಯದರ್ಶಿ ಪ್ರಕಾಶ್ ಮೇಲೆ ಹಲ್ಲೆ ನಡೆದಿದ್ದನ್ನು ಜೈನ್ ಕಣ್ಣಾರೆ ಕಂಡಿದ್ದಾರೆ ಎಂದು ಕಳೆದ ವಾರ ಪೋಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ಜೈನ್ ತಾವು ಯಾವ ಹಲ್ಲೆ ಘಟನೆಯನ್ನೂ ಕಂಡಿಲ್ಲ. ನಾನು ಘಟನೆ ನಡೆಯುವ ಸಮಯದಲ್ಲಿ ವಾಶ್ ರೂಂ ಗೆ ತೆರಳಿದ್ದೆ ಎಂದು ಪುನಃ ಹೇಳಿಕೆಯೊಂದರಲ್ಲಿ ತಿಳಿಸಿದ್ದರು.
ಇಂದು ದೆಹಲಿ ರಾಜ್ಯ ಬಜೆಟ್ ಸಂಬಂಧ ಪ್ರಮುಖ ವಿಚಾರಗಳ ಚರ್ಚೆಗಾಗಿ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲಿದ್ದ ಮುಖ್ಯ ಕಾರ್ಯದರ್ಶಿ ಅವರು ಅರವಿಂದ ಕೇಜ್ರಿವಾಲ್ ಗೆ ಪತ್ರ ಬರೆದಿದ್ದು ’ನಾನು ಸಂಪುಟ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ. ಆದರೆ ಈ ಸಭೆಯಲ್ಲಿ ನನ್ನ ಮೇಲೆ ಯಾವ ಹಲ್ಲೆಗಳು ನಡೆಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬಯಸುವೆ’ ಎಂದು ಕೇಳಿದ್ದರು.
ಮುಂದಿನ ಮಾರ್ಚ್ 16-28ರ ಅವಧಿಯಲ್ಲಿ ದೆಹಲಿಯಲ್ಲಿ ಬಜೆಟ್ ಅಧಿವೇಶನ ನಡೆಯಲಿದೆ.
SCROLL FOR NEXT