ದೇಶ

ಕಬ್ಬಿಣದ ರಾಡಿ ನಿಂದ 6 ಮಂದಿಯನ್ನು ಕೊಂದ ಮಾಜಿ ಸೇನಾಧಿಕಾರಿ, ಬಂಧನ

Lingaraj Badiger
ಪಲ್ವಾಲ್: ನಿವೃತ್ತ ಸೇನಾಧಿಕಾರಿಯೊಬ್ಬ ಹರಿಯಾಣದ ಪಲ್ವಾಲ್‌ ದಲ್ಲಿ ಎರಡು ಗಂಟೆಯಲ್ಲಿ ಆರು ಮಂದಿಯನ್ನು ಕಬ್ಬಿಣದ ರಾಡ್ ನಿಂದ ಹತ್ಯೆ ಮಾಡಿ, ಪೊಲೀಸರ ಮೇಲೂ ದಾಳಿ ನಡೆಸಿದ ಆಘಾತಕಾರಿ ಘಟನೆ ಮಂಗಳವಾರ ನಡೆದಿದೆ. 
ಸರಣಿ ಕೊಲೆ ಮಾಡಿದ ನಿವೃತ್ತ ಸೇನಾಧಿಕಾರಿಯನ್ನು ಪೊಲೀಸರು ಬಂಧಿಸಿದ್ದು, ದೆಹಲಿಯಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಪಲ್ವಾಲ್ ನಲ್ಲಿ ಇಂದು ಬೆಳಗಿನ ಜಾವ ಈ ಸರಣಿ ಹತ್ಯೆ ನಡೆಸಿದ್ದಾನೆ.
ಸೈಕೋ ಕಿಲ್ಲರ್ ನಿಂದ ಪುಲ್ವಾಲ್ ಪ್ರದೇಶದ ಜನತೆ ಆತಂಕಗೊಂಡಿದ್ದು, ನಿವಾಸಿಗಳಿಗೆ ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಗಿತ್ತು. ಅಂತಿಮವಾಗಿ ಪೊಲೀಸರು ಕೊಲೆಗಾರನನ್ನು ಬಂಧಿಸಿದ್ದು, ಪುಲ್ವಾಲ್ ಜನತೆ ನಿಟ್ಟೂಸಿರು ಬಿಡುವಂತಾಗಿದೆ.
ಸರಣಿ ಹತ್ಯೆ ಮಾಡಿದ ನಿವೃತ್ತ ಸೇನಾಧಿಕಾರಿ ನರೇಶ್‌ ಧಂಕಡ್ ಎಂದು ಗುರುತಿಸಲಾಗಿದ್ದು, 2003ರಲ್ಲಿ ಲೆಫ್ಟಿನೆಂಟ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದ.
ನರೇಶ್ ಕಬ್ಬಿಣದ ರಾಡ್‌ ಬಳಸಿ ಹತ್ಯೆ ಮಾಡಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಕೊಲೆಯಾದ ಆರು ಜನರಲ್ಲಿ ಓರ್ವ ಮಹಿಳೆ ಹಾಗೂ ಮೂವರು ವಾಚ್‌ಮನ್‌ಗಳಾಗಿದ್ದಾರೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಕೊಲೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನರೇಶ್ ಒಬ್ಬ ಮಾನಸಿಕ ಅಸ್ವಸ್ಥನೆಂದು ಹೇಳಲಾಗುತ್ತಿದ್ದು, ಬಂಧನದ ನಂತರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನರೇಶ್ ಕೊಲೆ ಮಾಡಲು ಕಬ್ಬಿಣದ ರಾಡ್ ಬಳಸಿದ್ದು, ಪಲ್ವಾನ್ ನಗರದ ಬೀದಿಗಳಲ್ಲಿ ನಡೆಯುತ್ತಿದ್ದವರನ್ನು ಕೊಲೆ ಮಾಡುತ್ತಾ ಮುಂದೆ ಹೋಗಿದ್ದಾನೆ ಅಂತಾ ಪಲ್ವಾಲ್ ನಗರ ಠಾಣೆಯ ಎಸ್‍ಪಿ ಸಲೋಚನಾ ಗಜರಾಜ್ ತಿಳಿಸಿದ್ದಾರೆ.
ಈ ಆರು ಕೊಲೆಗಳು ನಗರದ ಬೇರೆ ಬೇರೆ ಬೀದಿಗಳಲ್ಲಿ ನಡೆದಿವೆ. ಬೆಳಗಿನ ಜಾವ ಸುಮಾರು 2.30ಕ್ಕೆ ಪಲ್ವಾನ್ ಆಸ್ಪತ್ರೆಯಲ್ಲಿ ಅಂಜುಮ್ ಎಂಬ ಮಹಿಳೆಯನ್ನು ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಅಂಜುಮ್ ಮೃತ ದೇಹವನ್ನು ವಾಶ್ ರೂಮಿನಲ್ಲಿ ಬಚ್ಚಿಟ್ಟು, ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಕೈ ಯಲ್ಲಿ ಕಬ್ಬಿಣದ ರಾಡ್ ಹಿಡಿದು ಹೊರ ಬಂದವನೇ ಒಟ್ಟು 4 ಕೊಲೆಗಳನ್ನು ಮಾಡಿದ್ದಾನೆ. ಪಲ್ವಾಲ್ ನಗರದ ಆಗ್ರಾ ರೋಡ್ ಮತ್ತು ಮಿನಾರ್ ಗೇಟ್ ಬೀದಿಯಲ್ಲಿ ನಾಲ್ಕು ಜನರನ್ನು ಕೊಂದಿದ್ದಾನೆ. ನಗರದ ಮಾರುಕಟ್ಟೆ ಬಳಿಕ ಎಂಜಿನಿಯರಿಂಗ್ ವರ್ಕ್ ಶಾಪ್ ನ ವಾಚ್ ಮ್ಯಾನ್ ಕೊನೆಯದಾಗಿ ಕೊಲೆಯಾಗಿದ್ದಾನೆ.
SCROLL FOR NEXT