ಗೌಹಾಟಿ: ರಾಷ್ಟ್ರೀಯ ಪೌರ ನೋಂದಣಿ(ಎನ್ಆರ್ಸಿ) ಪ್ರಕ್ರಿಯೆ ಟೀಕಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಅಸ್ಸಾಂ ಪೊಲೀಸರು ಶುಕ್ರವಾರ ಎಫ್ ಐಆರ್ ದಾಖಲಿಸಿದ್ದಾರೆ.
ನಿನ್ನೆ ರ್ಯಾಲಿಯೊಂದರಲ್ಲಿ ಅಸ್ಸಾಂನ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಮಮತಾ ಬ್ಯಾನರ್ಜಿ, ಎನ್ಆರ್ಸಿ ಪ್ರಕ್ರಿಯೆ ಕೇವಲ ಬೆಂಗಾಲಿ ಭಾಷಿಗರನ್ನು ಅಸ್ಸಾಂ ರಾಜ್ಯದಿಂದ ಹೊರದಬ್ಬಲು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೆ ಅಕಸ್ಮಾತ್ ಆ ರೀತಿಯಾದಲ್ಲಿ ತಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ವಿರುದ್ಧ ಅಸ್ಸಾಂ ಪೊಲೀಸರು ಇಂದು ಎಫ್ಐಆರ್ ದಾಖಲಿಸಿದ್ದು, ಅಸ್ಸಾಂ ಬಿಜೆಪಿ ಸರ್ಕಾರದ ಈ ನಿರ್ಧಾರಕ್ಕೆ ತೃಣಮೂಲ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಈ ರೀತಿ ಕೇಸ್ ದಾಖಲಿಸುವದರಿಂದ ದೀದಿಯ ಹೋರಾಟ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅಸ್ಸಾಂ ಸಚಿವ ಚಂದ್ರಮೋಹನ್ ಪಟೌರಿ, ಈ ಪ್ರಕ್ರಿಯೆಯನ್ನು ಅಸ್ಸಾಂನ ಜನತೆ ಬೆಂಬಲಿಸಿದೆ. ಎಲ್ಲ ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಆದರೆ, ಬ್ಯಾನರ್ಜಿ ಅವರು ಮಾತ್ರ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಲ್ಲದೆ, ನಮ್ಮ ಜನತೆಗೆ ಅವಮಾನಿಸಿದ್ದಾರೆ ಎಂದಿದ್ದಾರೆ.
ಗೌಹಾಟಿ ಮೂಲದ ವಕಿಲರೊಬ್ಬರು ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos