ದೇಶ

ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ತೆರವಿಗೆ ಮುಂದಾದ ಯೋಗಿ ಸರ್ಕಾರ

Vishwanath S
ಲಖನೌ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಶಬ್ಧ ಮಾಲಿನ್ಯಕ್ಕೆ ಕಾರಣವಾಗುವ ಲೌಡ್ ಸ್ಪೀಕರ್ ಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ಅವುಗಳ ಸಮೀಕ್ಷೆಗೆ ಚಾಲನೆ ನೀಡಿದೆ. 
ಯೋಗಿ ಸರ್ಕಾರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಈ ಕುರಿತು ನಿರ್ದೇಶನ ನೀಡಿದೆ. ರಾಜ್ಯಾದ್ಯಂತ ಲೌಡ್ ಸ್ಪೀಕರ್ ಗಳು ಅಥವಾ ಮೈಕ್ ಗಳನ್ನು ಅಳವಡಿಸಿರುವ ಎಲ್ಲ ಧಾರ್ಮಿಕ ಕಟ್ಟಡಗಳು, ಸಾರ್ವಜನಿಕ ಸಭಾಂಗಣಗಳು ಅಥವಾ ಮಾರುಕಟ್ಟೆಗಳ ಸಮೀಕ್ಷೆ ನಡೆಸಲು ವಿಶೇಷ ತಂಡಗಳನ್ನು ರಚಿಸುವಂತೆ ಸೂಚಿಸಲಾಗಿದೆ. 
ಈ ಕುರಿತು ಜನವರಿ 4ರಂದು ರಾಜ್ಯ ಗೃಹ ಸಚಿವಾಲಯ ಪತ್ರವೊಂದನ್ನು ಬಿಡುಗಡೆ ಮಾಡಿತ್ತು. ವಸತಿ ಮತ್ತು ವಾಣಿಜ್ಯ ವಲಯಗಳನ್ನು ಪ್ರತ್ಯೇಕವಾಗಿ ಗುರುತಿಸುವಂತೆ ಮತ್ತು ಲೌಡ್ ಸ್ಪೀಕರ್ ಗಳ ಬಗ್ಗೆ ತ್ವರಿತ ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
ಜನವರಿ 10ರೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ಜನವರಿ 15ರ ಬಳಿಕ ಅನುಮತಿ ರಹಿತ ಲೌಡ್ ಸ್ಪೀಕರ್ ಗಳನ್ನು ತೆರವುಗೊಳಿಸುವ ಅಭಿಯಾನ ಆರಂಭವಾಗಲಿದೆ. 
ದೇವಸ್ಥಾನ, ಮಸೀದಿ, ಗುರುದ್ವಾರ ಮತ್ತು ಚರ್ಚ್ ಗಳಲ್ಲಿ ಅಳವಡಿಸಿದ ಲೌಡ್ ಸ್ಪೀಕರ್ ಗಳು ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದು ಅವುಗಳನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿ ಹೈಕೋರ್ಟಿನ ಲಖನೌ ಪೀಠಕ್ಕೆ ಮೋತಿಲಾಲ್ ಯಾದವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 
SCROLL FOR NEXT