ದೇಶ

ಆಧಾರ್ ಮಾಹಿತಿ ಸೋರಿಕೆ ಬಯಲು ಮಾಡಿದ ಪತ್ರಕರ್ತೆಗೆ ಪ್ರಶಸ್ತಿ ನೀಡಿ: ಎಡ್ವರ್ಡ್ ಸ್ನೋಡೆನ್

Srinivasamurthy VN
ನವದೆಹಲಿ: ಆಧಾರ್ ಮಾಹಿತಿ ಸೋರಿಕೆಯನ್ನು ಯಶಸ್ವಿಯಾಗಿ ಬಯಲಿಗೆಳೆದ ಭಾರತೀಯ ಪತ್ರಕರ್ತೆಗೆ ಪ್ರಶಸ್ತಿ ನೀಡಬೇಕು ಎಂದು ಅಮೆರಿಕದ ಗುಪ್ತಚರ ಇಲಾಖೆಯ ಬೇಹುಗಾರಿಕೆಯನ್ನು ಬಯಲುಗೊಳಿಸಿದ್ದ ಎಡ್ವರ್ಡ್  ಸ್ನೋಡೆನ್ ಹೇಳಿದ್ದಾರೆ.
ದೇಶದ ಭವಿಷ್ಯವನ್ನೇ ಬುಡಮೇಲು ಮಾಡಬಲ್ಲ ತೀರಾ ಗಂಭೀರ ಮತ್ತು ಸೂಕ್ಷ್ಮವಾದ ಪ್ರಕರಣವನ್ನು ಆ ಸಾಹಸಿ ಪತ್ರಕರ್ತೆ ಯಶಸ್ವಿಯಾಗಿ ಬಯಲಿಗೆಳೆದಿದ್ದಾರೆ. ಆ ಮೂಲಕ ಭವಿಷ್ಯದಲ್ಲಿ ಆಗಬಹುದಾದ ಮತ್ತಷ್ಟು ಸೋರಿಕೆಯನ್ನು  ಪರೋಕ್ಷವಾಗಿ ತಡೆದಿದ್ದಾರೆ. ಹೀಗಾಗಿ ಅ ಪತ್ರಕರ್ತೆಗೆ ತನಿಖೆಯನ್ನಲ್ಲ.. ಪ್ರಶಸ್ತಿ ನೀಡಿ ಗೌರವಿಸಿ ಎಂದು ಎಡ್ವರ್ಡ್ ಸ್ನೋಡೆನ್ ಹೇಳಿದ್ದಾರೆ. 
ಟ್ವಿಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಎಡ್ವರ್ಡ್ ಸ್ನೋಡೆನ್ ಸೋರಿಕೆ ಪ್ರಕರಣವನ್ನು ಬಯಲಿಗೆಳೆದ ದಿ ಟ್ರಿಬ್ಯೂನ್ ಪತ್ರಿಕೆಯ ಪತ್ರಕರ್ತೆ ರಚನಾ ಖೈರಾ ಅವರನ್ನು ತುಂಬು ಹೃದಯದಿಂದ ಶ್ಲಾಘಿಸಿದ್ದಾರೆ. 'ದೇಶದ  ಭವಿಷ್ಯವನ್ನೇ ಬುಡಮೇಲು ಮಾಡಬಲ್ಲ ತೀರಾ ಗಂಭೀರ ಮತ್ತು ಸೂಕ್ಷ್ಮವಾದ ಪ್ರಕರಣವನ್ನು ಆ ಸಾಹಸಿ ಪತ್ರಕರ್ತೆ ಯಶಸ್ವಿ ಬಯಲಿಗೆಳೆದಿದ್ದಾರೆ. ಹೀಗಾಗಿ ಆಕೆಗೆ ಪ್ರಶಸ್ತಿ ನೀಡಬೇಕೇ ಹೊರತು ತನಿಖೆ ಮಾಡಬಾರದು. ಭಾರತ  ಸರ್ಕಾರಕ್ಕೆ ಈ ಬಗ್ಗೆ ನಿಜಕ್ಕೂ ಆತಂಕವಿದ್ದರೆ ಇಂತಹ ಮಾಹಿತಿ ಸೋರಿಕೆ ಸಂಬಂಧ ತನ್ನ ಕಾರ್ಯನೀತಿಗಳನ್ನು ಬದಲಿಸಿ, ಮಾಹಿತಿ ಸೋರಿತೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರಬೇಕು. ಅಲ್ಲದೆ  ಪ್ರಸ್ತುತ ಮಾಹಿತಿ ಸೋರಿಕೆ ಮಾಡಿರುವ ಅಪರಾಧಿಗಳನ್ನು ಕಂಡು ಹಿಡಿದು ಶಿಕ್ಷಿಸಬೇಕು' ಎಂದು ಹೇಳಿದ್ದಾರೆ.
ಅಂತೆಯೇ ಆಧಾರ್ ನೇತೃತ್ವ ವಹಿಸಿಕೊಂಡಿರುವ ಯುಐಎಡಿಎ ಸಂಸ್ಥೆ ಕುರಿತೂ ಕಿಡಿಕಾರಿರುವ ಸ್ನೋಡೆನ್, ಸೋರಿಕೆ ಸಂಬಂಧ ಯುಐಎಡಿಎ ಅಧಿಕಾರಗಳನ್ನೂ ಕೂಡ ವಿಚಾರಣೆಗೊಳಪಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳ  ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಆಧಾರ್ ಮಾಹಿತಿ ಸೋರಿಕೆ ಸಂಬಂಧ ವರದಿ ಮಾಡಿದ್ದ "ದಿ ಟ್ರಿಬ್ಯೂನ್' ಪತ್ರಿಕೆಯ ವರದಿಗಾರ್ತಿ ರಚನಾ ಖೈರ್ ವಿರುದ್ಧ ನಿನ್ನೆಯಷ್ಟೇ ಯುಐಎಡಿಎ ಎಫ್ ಐಆರ್ ದಾಖಲಿಸಿತ್ತು. ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಪತ್ರಕರ್ತೆ ರಚನಾ  ಖೈರ್ ಇದು ನನ್ನ ಕಾರ್ಯಕ್ಕೆ ಸಿಕ್ಕ ಬಹುದೊಡ್ಡ ಗೌರವವಾಗಿದೆ. ಕನಿಷ್ಟಪಕ್ಷ ನನ್ನ ವರದಿಯಿಂದಾದರೂ ಸರ್ಕಾರ ಎಚ್ಚೆತ್ತುಕೊಂಡಿದೆ. ಇನ್ನು ಮುಂದೆ ಇಂತಹ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಲಿ ಎಂದು ಹೇಳಿದ್ದರು.
SCROLL FOR NEXT