ಸುದ್ದಿಗೋಷ್ಠಿಯಲ್ಲಿ ಪ್ರವೀಣ್ ತೊಗಾಡಿಯಾ
ಅಹ್ಮದಾಬಾದ್: ರಾಜಸ್ತಾನ ಪೊಲೀಸರು ಎನ್ ಕೌಂಟರ್ ನಲ್ಲಿ ನನ್ನನ್ನು ಹತ್ಯೆಗೈಯ್ಯಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಗಂಭೀರ ಆರೋಪ ಮಾಡಿದ್ದಾರೆ.
ನಿನ್ನೆ ಸಂಜೆ ನಾಪತ್ತೆಯಾಗಿದ್ದ ಪ್ರವೀಣ್ ತೊಗಾಡಿಯಾ ಅವರು ಇಂದು ಅಹ್ಮದಾಬಾದ್ ನ ಚಂದ್ರಮಣಿ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಬಗ್ಗೆ ಸುದ್ದಿ ಬೆನ್ನಲ್ಲೇ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಪ್ರವೀಣ್ ತೊಗಾಡಿಯಾ, ರಾಜಸ್ಥಾನ ಪೊಲೀಸರ ವಿರುದ್ಧ ಕೆಂಡಕಾರಿದ್ದಾರೆ. ಅನಾವಶ್ಯಕವಾಗಿ ರಾಜಸ್ತಾನ ಪೊಲೀಸರು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದು, ಬಂಧನದ ದೆಸೆಯಲ್ಲಿ ನನ್ನನ್ನು ಎನ್ ಕೌಂಟರ್ ಮಾಡಲು ಸಂಚು ರೂಪಿಸಿದ್ದಾರೆ ಎಂದು ನನ್ನ ಆಪ್ತವಲಯಗಳು ತಿಳಿಸಿವೆ. ರಾಜಸ್ಥಾನದಲ್ಲಿ ನನ್ನ ವಿರುದ್ಧ ಒಂದೇ ಒಂದು ವಾರಂಟ್ ಜಾರಿಯಾಗಿಲ್ಲ, ಹೀಗಿದ್ದೂ ಪೊಲೀಸರು ನಕಲಿ ಪ್ರಕರಣಗಳಲ್ಲಿ ನನ್ನನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಂತೆಯೇ ತಾವು ಮೊದಲಿನಿಂದಲೂ ಹಿಂದೂಗಳ ಏಕೀಕರಣಕ್ಕಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಹಿಂದೂಗಳ ಪರವಾಗಿ ಧ್ವನಿ ಎತ್ತಿದ್ದೇನೆ, ರಾಮ ಮಂದಿರ ವಿಚಾರ, ಗೋ ಸಂರಕ್ಷಣೆ ಕುರಿತ ನನ್ನ ಧ್ವನಿ ಅಡಗಿಸಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನ ಮಾಡುತ್ತಿವೆ. ಆದರೆ ನಾನು ಇದಕ್ಕೆಲ್ಲ ಹೆದರುವುದಿಲ್ಲ. ಹಿಂದೂಗಳಿಗಾಗಿ ನನ್ನ ಧ್ವನಿ ಎತ್ತುತ್ತೇನೆ. ಹಿಂದೂಗಳ ಪರವಾದ ನನ್ನ ಹೋರಾಟ ಮುಂದುವರೆಸುತ್ತೇನೆ. ಹಿಂದೂ ಪರ ಸಂಘಟನೆಗಳು ಒಗ್ಗೂಡಿದಾಗ ಮಾತ್ರ ಇಂತಹ ಕುತಂತ್ರಗಳನ್ನು ಹಣಿಯಲು ಸಾಧ್ಯ ಎಂದು ತೊಗಾಡಿಯಾ ಹೇಳಿದರು.
ರಕ್ಷಣೆಯ ಭರವಸೆ ನೀಡಿದ್ದ ಸಿಎಂ ವಸುಂಧರಾ ರಾಜೇ
ಇನ್ನು ರಾಜಸ್ತಾನ ಸಿಎಂ ವಸುಂಧರಾ ರಾಜೇ ಅವರ ಕುರಿತು ಮಾತನಾಡಿದ ತೊಗಾಡಿಯಾ, ರಾಜ್ಯ ಸರ್ಕಾರ ಅಂದು ಯಾವುದೇ ರೀತಿಯ ಪೊಲೀಸ್ ಕ್ರಮ ಕೈಗೊಳ್ಳದಂತೆ ನೊಡಿಕೊಳ್ಳುವುದಾಗಿ ಭರವಸೆ ನೀಡಿತ್ತು. ಸ್ವತಃ ಸಿಎಂ ವಸುಂಧರಾ ರಾಜೇ ಮತ್ತು ಗೃಹ ಸಚಿವ ಗುಲಾಬ್ ಚಾಂದ್ ಕಠಾರಿಯಾ ನನ್ನೊಂದಿಗೆ ಮಾತನಾಡಿದ್ದರು. ಆದರೆ ಅನುಮಾನಗೊಂಡಿದ್ದ ನಾನು ಮುನ್ನೆಚ್ಚರಿಕಾ ಕ್ರಮವಾಗಿ ನಾನಿರುವ ಸ್ಥಳ ತಿಳಿಯದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದೆ. ಆದರೆ ನನ್ನ ಮನೆಗೆ ವಾರಂಟ್ ಸಹಿತ ಬಂದಿದ್ದ ಪೊಲೀಸರು ನನ್ನ ಬಂಧನಕ್ಕೆ ಮುಂದಾಗಿದ್ದರು ಎಂದು ತೊಗಾಡಿಯಾ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos