ನವದೆಹಲಿ: 2008ರ ಗುಜರಾತ್ ಸರಣಿ ಬಾಂಬ್ ಸ್ಫೋಟದ ರೂವಾರಿ ಹಾಗೂ ಭಾರತದ ಮೋಸ್ಟ್ ವಾಂಟೆಂಡ್ ಉಗ್ರರ ಪಟ್ಟಿಯಲ್ಲಿದ್ದ ಬಂಧಿತ 'ಭಾರತದ ಬಿನ್ ಲಾಡೆನ್' ಕುಖ್ಯಾತಿಯ ಉಗ್ರ ಅಬ್ದುಲ್ ಸುಭಾನ್ ಖುರೇಷಿಯನ್ನು ದೆಹಲಿ ಕೋರ್ಟ್ 14 ದಿನ ಪೊಲೀಸ್ ವಶಕ್ಕೆ ನೀಡಿ ಸೋಮವಾರ ಆದೇಶಿಸಿದೆ.
ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಮರುಜೀವ ನೀಡಲೆಂದೇ ಭಾರತಕ್ಕೆ ವಾಪಸ್ ಆಗಮಿಸಿದ್ದ ಖುರೇಷಿಯನ್ನು ಗುಜರಾತ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ದೆಹಲಿ ಬಂಧಿಸಿದ್ದರು. ಬಳಿಕ ರಹಸ್ಯ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ ನಂತರ ಕೋರ್ಟ್ ಗೆ ಹಾಜರುಪಡಿಸಿದೆ.
ಆರೋಪಿಯ ವಿಚಾರಣೆ ನಡೆಸಿದ ಚೀಫ್ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ದೀಪಕ್ ಶೆರಾವತ್ ಅವರು, ಅಬ್ದುಲ್ ಸುಭಾನ್ ಖುರೇಷಿಯನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನ ಪೊಲೀಸರ ವಶಕ್ಕೆ ನೀಡಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಖುರೇಷಿ ಸ್ಫೋಟಕ ಮಾಹಿತಿ ಬಾಯಿ ಬಿಟ್ಟಿದ್ದು, ಖುರೇಶಿ ತನ್ನ ಹೆಸರು, ವಿಳಾಸ ಬದಲಿಸಿಕೊಂಡು ನಕಲಿ ದಾಖಲೆಗಳ ಸಹಾಯದಿಂದ ನೇಪಾಳದಲ್ಲಿ ವಾಸಿಸುತ್ತಿದ್ದನಂತೆ.
ಇತ್ತೀಚೆಗಷ್ಟೇ ಖುರೇಷಿ ಭಾರತಕ್ಕೆ ಆಗಮಿಸಿದ್ದು, ಭಾರತದಲ್ಲಿ ನಿಷೇಧಕ್ಕೊಳಗಾಗಿರುವ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಮರುಜೀವ ನೀಡಲೆಂದೇ ಭಾರತಕ್ಕೆ ವಾಪಸ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ದೆಹಲಿಯ ಸ್ಪೆಷಲ್ ಸೆಲ್ ನ ಡಿಸಿಪಿ ಪ್ರಮೋದ್ ಕುಶ್ವಾಹ್ ಅವರು, ಖುರೇಷಿ ವರ್ಷಗಳ ಕಾಲ ನಕಲಿ ದಾಖಲೆಗಳ ನೆರವಿನೊಂದಿಗೆ ನೇಪಾಳದಲ್ಲಿ ಜೀವಿಸುತ್ತಿದ್ದ. ಇದೀಗ ಕೆಲ ಉಗ್ರರ ಸಂಪರ್ಕ ಸಾಧಿಸಿ, ತನ್ನ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಮರು ಜೀವ ನೀಡಲು ಮುಂದಾಗಿದ್ದ. ಭವಿಷ್ಯದಲ್ಲಿ ಭಾರತದ ಪ್ರಮುಖ ನಗರಗಳಲ್ಲಿ ಸಾಕಷ್ಚು ವಿಧ್ವಂಸಕ ಕೃತ್ಯಗಳಿಗೆ ಯೋಜನೆ ರೂಪಿಸಿದ್ದ ಎಂದು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos