ದೇಶ

ಅಮರನಾಥ ಯಾತ್ರಿಗಳನ್ನು ರಕ್ಷಿಸಿದ ಚಾಲಕನಿಗೆ 2ನೇ ಅತ್ಯುನ್ನತ ಶೌರ್ಯ ಪ್ರಶಸ್ತಿ

Lingaraj Badiger
ನವದೆಹಲಿ: ಉಗ್ರರ ಗುಂಡಿನ ದಾಳಿಯ ನಡುವೆಯೂ ಸುರಕ್ಷಿತವಾಗಿ ಬಸ್ಸನ್ನು ಚಲಾಯಿಸಿಕೊಂಡು 52 ಅಮರನಾಥ ಯಾತ್ರಾರ್ಥಿಗಳ ಪ್ರಾಣ ಉಳಿಸಿದ್ದ ಗುಜರಾತ್‌ ಬಸ್ ಚಾಲಕ ಶೇಖ್ ಸಲೀಮ್ ಗಫೂರ್‌ ಅವರಿಗೆ ಕೇಂದ್ರ ಸರ್ಕಾರ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ಗಣರಾಜ್ಯೋತ್ಸವ ವೇಳೆ ಶೌರ್ಯ ಪ್ರದರ್ಶನಕ್ಕಾಗಿ ಕೇಂದ್ರ ಸರ್ಕಾರ ನಾಗರಿಕರಿಗೆ ನೀಡುವ ಅತ್ಯುನ್ನತ ಪುರಸ್ಕಾರ 'ಸರ್ವೋತ್ತಮ ಜೀವನ ರಕ್ಷ ಪದಕ' ವನ್ನು ಗಫೂರ್ ಗೆ ನೀಡಲಾಗಿದೆ.
ಪ್ರಶಸ್ತಿ ಜತೆಗೆ ಅವರಿಗೆ 1 ಲಕ್ಷ ನಗದು ಪುರಸ್ಕಾರವನ್ನೂ ಗಣರಾಜ್ಯೋತ್ಸವ ಆಚರಣೆಯಂದು ಪ್ರದಾನ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಇಂದು ತಿಳಿಸಿದೆ.
2017ರ ಜುಲೈ 10ರಂದು ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಬಟೆಂಗೂ ಎಂಬಲ್ಲಿ ಉಗ್ರರ ತಂಡ ಅಮರನಾಥ ಯಾತ್ರಾರ್ಥಿಗಳ ಬಸ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ 14 ಯಾತ್ರಾರ್ಥಿಗಳು ಮೃತಪಟ್ಟಿದ್ದರು. ಅಲ್ಲದೆ ಹಲವರು ಗಾಯಗೊಂಡಿದ್ದರು. ಆದರೆ ಬಸ್ ಚಾಲಕ ಗಫೂರ್ ಅವರು ಗುಂಡಿನ ದಾಳಿಯ ನಡುವೆಯೂ ಬಸ್ಸನ್ನೂ ಸುರಕ್ಷಿತ ಸ್ಥಳಕ್ಕೆ ಚಲಾಯಿಸಿಕೊಂಡು ಹೋಗಿ 52 ಮಂದಿ ಪ್ರಾಣ ರಕ್ಷಿಸಿದ್ದರು.
SCROLL FOR NEXT